ಶ್ರೀರಂಗಪಟ್ಟಣ: ‘ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಇರುವವರು ಶಿಸ್ತು ಮತ್ತು ಸಮಯ ಪಾಲನೆ ರೂಢಿಸಿಕೊಳ್ಳುವುದು ಮುಖ್ಯ’ ಎಂದು ರಂಗಕರ್ಮಿ ಗೀತಾ ಮೋಟಂಡ್ಕ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ರೇಂಜರ್ಸ್ ಮತ್ತು ರೋವರ್ಸ್, ಎನ್ಎಸ್ಎಸ್ ಹಾಗೂ ರೆಡ್ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಯವನ್ನು ಗಂಟೆಗಳ ಲೆಕ್ಕದಲ್ಲಿ ಹಂಚಿಕೆ ಮಾಡಿಕೊಂಡು ಗುರಿಯತ್ತ ಹೆಜ್ಜೆ ಇಡಬೇಕು. ನಿಗದಿತ ಗುರಿ ತಲುಪಲು ಒಂದು ವರ್ಷದ ಅವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಪ್ರಯತ್ನ ನಿರಂತರವಾಗಿರಬೇಕು. ಸಮಸ್ಯೆಗಳನ್ನು ಸಂದರ್ಭಾನುಸಾರ ಬಗೆಹರಿಸಿಕೊಂಡು ಮುನ್ನಡೆಯಬೇಕು. ಪದವಿ ಹಂತದ ವಿದ್ಯಾರ್ಥಿಗಳು ಕೆಪಿಎಸ್ಸಿ, ಯುಪಿಎಸ್ಸಿ ಇತರ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತ ಹರಿಸುವುದು ಒಳಿತು’ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರಸಾದ್ ಎಸ್.ಪಿ, ಮಾತನಾಡಿ, ‘ವಿದ್ಯಾರ್ಥಿಯ ಜೀವನದಲ್ಲಿ ಪದವಿ ಶಿಕ್ಷಣ ನಿರ್ಣಾಯಕ ಘಟ್ಟ. ಸಣ್ಣ ಪುಟ್ಟ ಸಮಸ್ಯೆಗಳಿಗೆ ವಿಚಲಿತರಾಗದೆ ಅಭ್ಯಾಸ ಮುಂದುವರೆಸಬೇಕು. ಉನ್ನತ ಶಿಕ್ಷಣ ಹಾಗೂ ಉದ್ಯೋಗ ಸಂಬಂಧ ವಿವಿಧ ವೇದಿಕೆಗಳಲ್ಲಿ ವೃತ್ತಿ ಮಾರ್ಗದರ್ಶನ ಸಿಗುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಕ್ರೀಡಾಪಟು ನವಮಿ ಎಚ್.ಆರ್ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ವೇದಿಕೆ ಮತ್ತು ಕ್ರೀಡಾ ಸಮಿತಿ ಸಂಚಾಲಕಿ ಸಂಗೀತಾ.ಕೆ, ಪ್ರಾಧ್ಯಾಪಕರಾದ ಎ. ಸಿ. ಮಂಜುಳಾ, ಮೂರ್ತಿ ಐ.ಆರ್, ಕವಿತಾ ಬಿ. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.