ಮಂಡ್ಯ: ಕೊರೊನಾ ಸಂಕಷ್ಟದ ಕಾಲದಲ್ಲಿ ಕುಟುಂಬವನ್ನು ಲೆಕ್ಕಿಸದೆ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ₹ 25 ಪ್ರೋತ್ಸಾಹಧನ ನೀಡಬೇಕು, ಸ್ಥಳೀಯ ಸಾರಿಗೆ ಬಸ್ಪಾಸ್, ಊಟದ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಅಂಗನವಾಡಿ ನೌಕರರಿಗೆ ಗುಣಮಟ್ಟದ ಸ್ಯಾನಿಟೈಸರ್, ಪಿಪಿಇ ಕಿಟ್, ಮುಖಗವಸು ನೀಡಬೇಕು. ಕೆಲಸದ ಸಂದರ್ಭದಲ್ಲಿ ಅಂಗನವಾಡಿ ನೌಕರರಿಗೆ ಹಲ್ಲೆಗಳಾಗಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು. ಕೊರೊನಾ ವಾರಿಯರ್ಸ್ ಆಗಿರುವುದರಿಂದ ₹50ಲಕ್ಷ ವಿಮೆ ಕೊಡಬೇಕು. ಸೋಂಕಿತರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಮಾಸಿಕವಾಗಿ ಮಕ್ಕಳ ತಪಾಸಣೆ ಮತ್ತು ಸೂಕ ಮಾಡುವಾಗ ಅಂಗನವಾಡಿ ಕೇಂದ್ರಗಳನ್ನು ತೂಕದ ಯಂತ್ರಗಳನ್ನು ಸ್ಯಾನಿಟೈಸ್ ಮಾಡಬೇಕು.
ಮುಂಗಡವಾಗಿ ಮೊಟ್ಟೆ ಬಿಲ್, ತಿಂಗಳಿಗೆ ಸರಿಯಾಗಿ ಬಾಡಿಗೆ, ಗ್ಯಾಸ್, ಗೌರವಧನವನ್ನು ಪಾವತಿಸಬೇಕು. ಬಾಕಿ ಇರುವ ಅರಿಯರ್ಸ್, ಮರಣ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಸಹಾಯಕಿಯರಿಗೆ ಮುಂಬಡ್ತಿ ನೀಡುವಾಗ ಇರುವ ವಯಸ್ಸಿನ ಮಿತಿಯನ್ನು ತೆಗೆದು ಹಾಕಬೇಕು. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೆ ಕಾರ್ಯಕರ್ತೆಯರಿಗೆ ₹30ಸಾವಿರ, ಸಹಾಯಕಿಯರಿಗೆ ₹21ಸಾವಿರ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು, ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಳ ಮಾಡಬೇಕು, ಸರಿಯಾದ ಸಮಯದಲ್ಲಿ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬೇಕು. ಕೊರೊನಾ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳನ್ನು ಪ್ಯಾಕೆಟ್ ಮಾದರಿಯಲ್ಲಿ ನೀಡಬೇಕು. ಆದಾಯ ತೆರಿಗೆ ರಹಿತ ಎಲ್ಲಾ ಕುಟುಂಬಗಳಿಗೆ ಮಾಸಿಕ ₹7500ಗಳಂತೆ 6ತಿಂಗಳು ನೀಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಮೀಳಕುಮಾರಿ, ಕಾರ್ಯದರ್ಶಿ ಮಂಗಳಾ, ಖಜಾಂಚಿ, ಶಿಲ್ಪಶ್ರೀ, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಸಿ.ಕುಮಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.