ADVERTISEMENT

ಮಂಡ್ಯ: ಆಮ್ಲಜನಕ ಸಿಗದೆ ರೋಗಿ ಸಾವು?

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:30 IST
Last Updated 4 ಮೇ 2021, 3:30 IST

ಮಂಡ್ಯ: ನಗರದ ಹಾಲಹಳ್ಳಿ ಬಡಾವಣೆಯ 45 ವರ್ಷದ ಕೋವಿಡ್‌ ರೋಗಿಯೊಬ್ಬರು ಮಿಮ್ಸ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ ಕೀಲಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. 2 ದಿನಗಳ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆ ಅವರಿಗೆ ಮತ್ತೆ ಮಿಮ್ಸ್‌ ಆಸ್ಪತ್ರೆಯಲ್ಲಿ ಸಿಕ್ಕಿರಲಿಲ್ಲ. ಅವರಿಗೆ ತುರ್ತು ವೆಂಟಿಲೇಟರ್‌ ಅವಶ್ಯಕತೆ ಇತ್ತು.

ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಆಮ್ಲಜನಕ ದೊರೆಯಲಿದೆ ಎಂದು ತಿಳಿಸಿ ಮಿಮ್ಸ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಅವರು ಮಾರ್ಗಮಧ್ಯೆ ವ್ಯಕ್ತಿ ಮೃತಪಟ್ಟರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ADVERTISEMENT

ವ್ಯಕ್ತಿಯ ಸಹೋದರ ಯೋಗೇಶ್‌ ಮಾತನಾಡಿ ‘ಆಂಬುಲೆನ್ಸ್‌ನಲ್ಲಿ ಆಮ್ಲಜನಕವಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಆಂಬುಲೆನ್ಸ್‌ ಸಿಲಿಂಡರ್‌ನಲ್ಲಿ ಆಮ್ಲಜನಕ ಖಾಲಿಯಾಗಿದ್ದ ಕಾರಣ ಅಣ್ಣ ಮೃತಪಟ್ಟರು. ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ’ ಎಂದರು.

‘ವ್ಯಕ್ತಿ ಸಾವಿನ ವಿವರ ಸೋಮವಾರದ ಆರೋಗ್ಯ ವರದಿಯಲ್ಲಿ ದಾಖಲಾಗಿಲ್ಲ, ಮಂಗಳವಾರ ಪರಿಶೀಲಿಸಿ ಮಾಹಿತಿ ನೀಡಲಾಗುವುದು’ ಎಂದು ಮಿಮ್ಸ್‌ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.