ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಯಲ್ಲಿ ಜೋಡೆತ್ತುಗಳದ್ದೆ ಕಾರುಬಾರು ಇತ್ತು. ವ್ಯಾಪಾರ ಬಲು ಜೋರಾಗಿ ನಡೆಯಿತು.
ಬೇಬಿಬೆಟ್ಟದ ತಪ್ಪಲಿನಲ್ಲಿ ಮರಗಳ ನೆರಳಿನಲ್ಲಿ ರಾಜ್ಯದ ವಿವಿಧಡೆಯಿಂದ ಬಂದು ರೈತರು ಕಟ್ಟಿರುವ ಜೋಡೆತ್ತುಗಳು, ಹೋರಿಗಳು, ಕಡಸುಗಳನ್ನು ಕಣ್ತುಂಬಿಕೊಳ್ಳಲು, ಕೊಂಡುಕೊಳ್ಳಲು ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಂಡಿದ್ದರು.
ಹಾಲುಹಲ್ಲು, 2, 4, 6 ಹಲ್ಲುಗಳು ಹಾಗೂ ಕಡೆ ಹಲ್ಲಿನ ಹಳ್ಳಿಕಾರ್ ತಳಿಯ ಜೋಡೆತ್ತುಗಳು, ಬೀಜದ ಹೋರಿಗಳು ಬಂದು ಸೇರಿವೆ. ಹಾಲುಹಲ್ಲಿನ ಜೋಡೆತ್ತುಗಳು ₹4 ಲಕ್ಷ, 2 ಹಲ್ಲಿನ ಜೋಡೆತ್ತುಗಳು ₹9 ಲಕ್ಷದವರೆಗೆ, 4 ಹಲ್ಲಿನ ಜೋಡೆತ್ತುಗಳು ₹7 ಲಕ್ಷ, ಆರು ಹಲ್ಲಿನ ಜೋಡೆತ್ತುಗಳು ₹4 ಲಕ್ಷ, ಕಡೆ ಹಲ್ಲಿನ ಜೋಡೆತ್ತುಗಳು ₹9 ಲಕ್ಷದವರೆಗೆ ಬೆಲೆ ನಿಗದಿಪಡಿಸಿದ್ದು, ಜಾತ್ರೆಯಲ್ಲಿ ಸುಮಾರು 1500 ಕ್ಕೂ ಜೋಡೆತ್ತುಗಳು ಬಂದು ಸೇರಿವೆ.
ಟವಲೊಳಗೆ ಬೆಲೆ ನಿರ್ಧಾರ:
ಜೋಡೆತ್ತುಗಳನ್ನು ಮಾರಾಟ ಮಾಡುವ ಮತ್ತು ಕೊಳ್ಳಲು ಬರುವ ರೈತರು ಮಧ್ಯೆ ಬೆಲೆ ನಿರ್ಧಾರ ಮಾಡಲು ಮಧ್ಯವರ್ತಿ ಇದ್ದು, ಎರಡು ಕಡೆಯ ಮಧ್ಯವರ್ತಿಗಳು ಟವಲ್ ಹಿಡಿದು ಅದರೊಳಗೆ ಕೈ ಹಾಕಿ ಬೆರಳು ಹಿಡಿದು ಲೆಕ್ಕಾಚಾರ ಹಾಕುತ್ತಾರೆ. ಐದು ಬೆರಳು ಹಿಡಿದರೆ ₹5 ಲಕ್ಷ, ಆರು ಬೆರಳು ಹಿಡಿದರೆ ₹6 ಲಕ್ಷ ಹೀಗೆ ಅವರ ಲೆಕ್ಕಾಚಾರ ಸಾಗಿ ಕೊನೆಗೆ ಒಂದು ಇತ್ಯರ್ಥಕ್ಕೆ ಬಂದು ಬೆಲೆ ನಿಗದಿ ಮಾಡುತ್ತಾರೆ.
ಜಾತ್ರೆಯಲ್ಲಿ ಹಲವು ರೈತರು ತಮ್ಮ ರಾಸುಗಳನ್ನು ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದು, ಪಾಂಡವಪುರ ತಾಲ್ಲೂಕಿನ ಶ್ಯಾದನಹಳ್ಳಿಯ ರೈತ ಸಿ.ಚಲುವರಾಜು ಅವರು ಅವರಿಗೆ ತಂದೆ ಚಲುವೇಗೌಡ ಅವರ ಕಾಲದಿಂದಲೂ ಎತ್ತುಗಳನ್ನು ಸಾಕುವುದು ಹವ್ಯಾಸವಾಗಿದೆ. 50 ವರ್ಷಗಳಿಂದಲೂ ಇದುವರೆಗೂ ಸುಮಾರು 150ಕ್ಕೂ ಹೆಚ್ಚು ಜೋಡೆತ್ತುಗಳನ್ನು ಸಾಕಿದ್ದಾರೆ. ಎತ್ತುಗಳಿಗೆ ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುವುದು. ರವೆ ಗಂಜಿ, ಬೂಸ, ಹುಲ್ಲು, ಹಾಲು ಬೆಣ್ಣೆಯನ್ನು ಎತ್ತುಗಳಿಗೆ ತಿನ್ನಿಸುತ್ತಾರೆ.
ದಿನವೊಂದಕ್ಕೆ ಸುಮಾರು ₹500ಗಳನ್ನು ಎತ್ತುಗಳಿಗಾಗಿ ಖರ್ಚು ಮಾಡುತ್ತಾರೆ. ಈ ಬಾರಿ ಜಾತ್ರೆಯಲ್ಲಿ 2 ಹಲ್ಲಿನ ಸುಮಾರು ₹5ಲಕ್ಷ ಬೆಲೆ ಬಾಳುವ ಎತ್ತುಗಳನ್ನು ಕಟ್ಟಿದ್ದಾರೆ.
ಅಮೃತ ಮಹಲ್ ಕಾವಲ್:
ಮೈಸೂರಿನ ಮಹರಾಜರು ಈ ಹಿಂದೆಯೇ ಹಸು ದನಕರುಳಿಗಳು ಮೇಯಲು ಬೇಬಿಬೆಟ್ಟದಲ್ಲಿ ಸುಮಾರು 1,500ರಷ್ಟು ಪ್ರದೇಶವನ್ನು ಮೀಸಲಿಟ್ಟು ಇದಕ್ಕೆ ಅಮೃತ ಮಹಲ್ ಕಾವಲ್ ಎಂದು ಹೆಸರು ಇಟ್ಟಿದ್ದರು.
ಚಿನ್ನದ ಬಹುಮಾನ
‘ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ನೇತೃತ್ವದಲ್ಲಿ ನಡೆಯುತ್ತಿರುವ ಬೇಬಿಬೆಟ್ಟದ ಭಾರಿ ದನಗಳ ಜಾತ್ರೆಗೆ ಬರುವ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡಲಾಗುತ್ತಿದೆ. ಜಾತ್ರೆಯಲ್ಲಿ ಸುಮಾರು 350 ಮಂದಿ ಜೋಡೆತ್ತುಗಳನ್ನು ಬಹುಮಾನಕ್ಕಾಗಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೊರ ಜಿಲ್ಲೆಯ ತಜ್ಞರ ಸಮಿತಿಯು ಉತ್ತಮ ರಾಸುಗಳನ್ನು ಆಯ್ಕೆ ಮಾಡುತ್ತಾರೆ. ವಿವಿಧ ಬಗೆಯ ಜೋಡೆತ್ತುಗಳು ಕಡುಗಳು ಮತ್ತು ಹೋರಿಗಳಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು’ ಎಂದು ಪಶು ವೈದ್ಯಕೀಯ ಇಲಾಖೆಯ ವೈದ್ಯ ಡಾ.ಕೃಷ್ಣೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.