ADVERTISEMENT

ಸುಳ್ಳು ಸುದ್ದಿ ಪತ್ತೆಗೆ ‘ಕೊರೊನಾ ಜಾಗೃತಿ ಸೈನಿಕರು’ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 13:55 IST
Last Updated 23 ಮಾರ್ಚ್ 2020, 13:55 IST

ಮಂಡ್ಯ: ಕೊರೊನಾ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲನೆಗಾಗಿ ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ 20 ಜನ ಸ್ವಯಂ ಸೇವಕರ ‘ಕೊರೊನಾ ಜಾಗೃತಿ ಸೈನಿಕರು’ ತಂಡ ರಚನೆ ಮಾಡಿದೆ.

ಸ್ವಯಂ ಸೇವಕರು ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್‌ಕ್ರಾಸ್‌ ಸೊಸೈಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕಿನ ಕುರಿತು ಜಿಲ್ಲೆಯಲ್ಲಿ ಯಾವುದೇ ಸುದ್ದಿ ಹರಿದಾಡಿದರೆ ಈ ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಪರಿಶೀಲನೆ ಮಾಡಲಿದ್ದಾರೆ. ಅದು ಸುಳ್ಳುಸುದ್ದಿಯಾಗಿದ್ದರೆ ಆ ಕುರಿತ ಮಾಹಿತಿಯನ್ನು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಲಿದ್ದಾರೆ.

ಈ ಸ್ವಯಂ ಸೇವಕರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತರಬೇತಿ ನೀಡಿದ್ದು ಜಾಗೃತಿ ಭಿತ್ತಪತ್ರ, ಆರೋಗ್ಯ ಕಿಟ್‌ ವಿತರಣೆ ಮಾಡಿದ್ದಾರೆ. ತಂಡದ ಸದಸ್ಯರು ಸುಳ್ಳುಸುದ್ದಿ ಪತ್ತೆ ಮಾಡುವ ಜೊತೆಗೆ ಜನರಲ್ಲಿ ಸೋಂಕಿನ ಜಾಗೃತಿ ಮೂಡಿಸಲಿದ್ದಾರೆ.

ADVERTISEMENT

‘ಸುಳ್ಳು ಸುದ್ದಿಗಳು ಕೊರೊನಾ ವೈರಾಣುವಿಗಿಂತಲೂ ವೇಗವಾಗಿ ಹರಡುತ್ತಿವೆ. ಇದರಿಂದಾಗಿ ಜನರಲ್ಲಿ ಭಯ, ತಲ್ಲಣದ ವಾತಾವರಣ ಸೃಷ್ಟಿಯಾಗಿದೆ. ಸಮಾಜದಲ್ಲಿ ಶಾಂತಿ ಹಾಗೂ ಎಚ್ಚರಿಕೆಯ ಸಂದೇಶ ನೆಲೆಸುವಂತೆ ಮಾಡಲು ಕೊರೊನಾ ಜಾಗೃತಿ ಸೈನಿಕರ ತಂಡ ರಚನೆ ಮಾಡಲಾಗಿದೆ. ಸುದ್ದಿಯ ವಾಸ್ತವಾಂಶ ಪತ್ತೆ ಮಾಡುವುದೇ ಇದರ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.