ADVERTISEMENT

ಬೊಮ್ಮಾಯಿ ತಂಡದ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ

ಪ್ರತಿಭಟನಾ ಸ್ಥಳಕ್ಕೆ ಭೇಟಿ; ರೈತರ ಹಿತ ಕಾಯುವ ಭರವಸೆ ನೀಡಿದ ಕೃಷಿ ಸಚಿವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:23 IST
Last Updated 8 ಸೆಪ್ಟೆಂಬರ್ 2023, 14:23 IST
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕಾವೇರಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು
ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕಾವೇರಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು   

ಮಂಡ್ಯ: ‘ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ಮುಖಂಡರು ದೆಹಲಿಗೆ ತೆರಳಿ ಕಾವೇರಿ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಡ ಹಾಕಬೇಕಾಗಿತ್ತು. ಬಿಜೆಪಿ ಸಂಸದರು ಸಂಸತ್‌ನಲ್ಲಿ ಈ ಕುರಿತು ಧ್ವನಿ ಎತ್ತಬೇಕಿತ್ತು. ಅದನ್ನು ಬಿಟ್ಟು ಕೇವಲ ರಾಜಕಾರಣಕ್ಕಾಗಿ ಕೆಆರ್‌ಎಸ್‌ ವೀಕ್ಷಣೆ ಮಾಡಲು ಬಂದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶುಕ್ರವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಿಜೆಪಿಯವರು ಅಧಿಕಾರದಿಂದ ಕೆಳಗಿಳಿದು 4 ತಿಂಗಳಾಗಿದೆ, ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? 25 ಜನರು ಸಂಸದರು ಇದ್ದರೂ ಕಾವೇರಿ ಸಮಸ್ಯೆಯ ಬಗ್ಗೆ ಒಂದು ದಿನವೂ ಮಾತನಾಡಿಲ್ಲ. ಕೆಆರ್‌ಎಸ್‌ ಜಲಾಶಯದ ವೀಕ್ಷಣೆ ನೆಪದಲ್ಲಿ ಪ್ರದರ್ಶನ ಮಾಡಲು ಬಂದಿದ್ದಾರೆ’ ಎಂದು ಆರೋಪಿಸಿದರು.

ಹೋರಾಟ ಸ್ಥಳಕ್ಕೆ ಭೇಟಿ: ಸರ್‌ಎಂವಿ ಪ್ರತಿಮೆ ಬಳಿ ನಡೆಯುತ್ತಿದ್ದ ಕಾವೇರಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಅವರು ‘ನಮ್ಮ ಸರ್ಕಾರ ರೈತರ ಪರವಾಗಿದೆ. ಪ್ರಚಾರಕ್ಕೋಸ್ಕರ ನಾವು ಕೆಲಸ ಮಾಡುವುದಿಲ್ಲ. ರಾಜ್ಯದ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಕ್ರಮ ವಹಿಸಲಾಗಿದೆ’ ಎಂಧರು.

ADVERTISEMENT

‘ನಮಗೆ ಅಗತ್ಯವಾಗಿ ಸಂಕಷ್ಟ ಸೂತ್ರ ಬೇಕಾಗಿದೆ. ಬರ ಬಂದಾಗ, ಕಡಿಮೆ ನೀರಿನ ಸಂಗ್ರಹ ಇದ್ದಾಗ ಯಾವ ರೀತಿ ನೀರು ಬಿಡಬೇಕು ಎಂಬುದಕ್ಕೆ ಯಾವುದೇ ಸಮಿತಿ ಇಲ್ಲ. ಸಂಕಷ್ಟ ಸೂತ್ರ ರಚನೆಯೇ ನಮ್ಮ ಉದ್ದೇಶವಾಗಿದೆ. ಸರ್ವಪಕ್ಷ ಸಭೆ ನಡೆಸಿದ ಮೇಲೆ ಪ್ರಧಾನ ಮಂತ್ರಿ ಜೊತೆ ಈ ಕುರಿತು ಮಾತನಾಡಲು ನಿರ್ಧರಿಸಲಾಗಿದೆ’ ಎಂದರು.

‘ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಯಲ್ಲಿಯೂ ನಾನು ಮಾತನಾಡಿದ್ದೇನೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದೇನೆ. ಸೆ.12ರ ನಂತರ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸುಪ್ರೀಂ ಕೋರ್ಟ್‌ ಮುಂದೆ ಸಮರ್ಥವಾಗಿ ವಾದ ಮಂಡಿಸುತ್ತೇವೆ’ ಎಂದರು.

ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.