ADVERTISEMENT

ಕುಮಾರಣ್ಣನ ಗೆಲ್ಲಿಸುವ ಜವಾಬ್ದಾರಿ ನನ್ನದು; ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 14:11 IST
Last Updated 21 ಮಾರ್ಚ್ 2024, 14:11 IST
ಸಿ.ಎಸ್‌.ಪುಟ್ಟರಾಜು
ಸಿ.ಎಸ್‌.ಪುಟ್ಟರಾಜು   

ಪಾಂಡವಪುರ (ಮಂಡ್ಯ ಜಿಲ್ಲೆ): ‘ನೂರಕ್ಕೆ ನೂರರಷ್ಟು ಕುಮಾರಣ್ಣನೇ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ. ಅವರು ನಾಮಪತ್ರ ಸಲ್ಲಿಸಿದರೆ ಸಾಕು, ನಾನೇ ಚುನಾವಣೆ ನೇತೃತ್ವ ವಹಿಸಿಕೊಂಡು ಅಭೂತಪೂರ್ವವಾಗಿ ಗೆಲ್ಲಿಸುವ ಜವಾಬ್ದಾರಿ ಹೊರುತ್ತೇನೆ’ ಎಂದು ಜೆಡಿಎಸ್‌ ನಾಯಕ ಸಿ.ಎಸ್‌.ಪುಟ್ಟರಾಜು ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಎಚ್‌.ಡಿ.ದೇವೇಗೌಡರ ನೇತೃತ್ವ, ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದೊಂದಿಗೆ ಕುಮಾರಣ್ಣನನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸುತ್ತೇವೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರೇ ಬರಬೇಕು ಎಂದು ನಿರ್ಣಯ ಕೈಗೊಂಡಿದ್ದೆವು. ಕಾರ್ಯಕರ್ತರ ಒತ್ತಾಯವೂ ಅದೇ ಆಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ಕುಮಾರಣ್ಣ ಸ್ಪರ್ಧೆ ಮಾಡಲು ಒಪ್ಪಿದ್ದಾರೆ’ ಎಂದರು.

‘ಜೆಡಿಎಸ್‌ಗೆ ಎಷ್ಟು ಕ್ಷೇತ್ರಗಳು ದೊರೆಯಲಿವೆ ಎಂಬ ಬಗ್ಗೆ ಶುಕ್ರವಾರ ಅಧಿಕೃತ ಮಾಹಿತಿ ದೊರೆಯುವ ಸಾಧ್ಯತೆ ಇದೆ. ಟಿಕೆಟ್‌ ಘೋಷಣೆ ಬಳಿಕ ಸಂಸದೆ ಸುಮಲತಾ ಅವರ ಜೊತೆಗೂ ಮಾತನಾಡುತ್ತೇವೆ. ಹಿಂದೆ ಅವರ ಹಾಗೂ ನಮ್ಮ ಮಧ್ಯ ಸಣ್ಣಪುಟ್ಟ ವ್ಯತ್ಯಾಸ ಆಗಿತ್ತು, ಈಗ ಪರಿಸ್ಥಿತಿ ಬದಲಾಗಿದ್ದು ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇವೆ’ ಎಂದರು.

ADVERTISEMENT

‘ಕುಮಾರಣ್ಣನ ತೋಟದ ಮನೆಗೆ ಮಂಡ್ಯದಿಂದ 20 ಕಿ.ಮೀ ಪ್ರಯಾಣ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಬಂಗಲೆ ಬೆಂಗಳೂರಿನ ಡಾಲರ್ಸ್‌ ಕಾಲೊನಿಯಲ್ಲಿದ್ದು, ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಯಾರು ಸ್ಥಳೀಯರು ಎಂದು ಜನ ತೀರ್ಮಾನಿಸುತ್ತಾರೆ. ಯಾವುದೋ ದುಡ್ಡು ತಂದು ತಾತ್ಕಾಲಿಕವಾಗಿ ಮನೆ ಮಾಡಿದರೆ ಜನ ಒಪ್ಪುವುದಿಲ್ಲ’ ಎಂದರು.

‘ಕಾಂಗ್ರೆಸ್ ನಾಯಕರು ಪುಟ್ಟರಾಜುಗೆ ಗಾಳ ಹಾಕಿದ್ದಾರೆ’ ಎನ್ನಲಾದ ಪ್ರಶ್ನೆಗೆ ಉತ್ತರಿಸಿ, ‘ನಾನು ದೇವೇಗೌಡರ ಮನೆ ಮಗ, ನನ್ನ ಕೊನೆ ಉಸಿರು ಇರುವವರೆಗೂ ಹಾಗೆಯೇ ಇರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.