ADVERTISEMENT

‘ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ’

ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ: ಜನಸ್ನೇಹಿ ಆಡಳಿತ ನೀಡಿ– ಜಿಲ್ಲಾಧಿಕಾರಿ ಕುಮಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:52 IST
Last Updated 31 ಅಕ್ಟೋಬರ್ 2025, 6:52 IST
ನಾಗಮಂಗಲ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ತಹಶೀಲ್ದಾರ್‌ ಜಿ.ಆದರ್ಶ, ಉಪವಿಭಾಗಾಧಿಕಾರಿ ಶ್ರೀನಿವಾಸ್‌ ಪಾಲ್ಗೊಂಡಿದ್ದರು 
ನಾಗಮಂಗಲ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ತಹಶೀಲ್ದಾರ್‌ ಜಿ.ಆದರ್ಶ, ಉಪವಿಭಾಗಾಧಿಕಾರಿ ಶ್ರೀನಿವಾಸ್‌ ಪಾಲ್ಗೊಂಡಿದ್ದರು    

ಮಂಡ್ಯ: ‘ಪ್ರಕೃತಿ ವಿಕೋಪ, ಆಕಸ್ಮಿಕ ಅವಘಡ ಹಾಗೂ ಇತರೆ ರೀತಿಯ ವಿಕೋಪಗಳಲ್ಲಿ ಬಾಧಿತರಾದವರಿಗೆ ತುರ್ತಾಗಿ ಪರಿಹಾರ ಪಾವತಿ ಮಾಡುವಲ್ಲಿ ಶೀಘ್ರವೇ ಕ್ರಮವಹಿಸಬೇಕು. ಅಧಿಕಾರಿಗಳು ಜನಸ್ನೇಹಿ ಆಡಳಿತವನ್ನು ನೀಡಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.

ನಾಗಮಂಗಲ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಸ್ವೀಕೃತ ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಕಚೇರಿಯಲ್ಲಿ ಬಾಕಿಯಿರುವ ನ್ಯಾಯಾಲಯ ಪ್ರಕರಣಗಳ ಬಗ್ಗೆ ತುರ್ತಾಗಿ ಕ್ರಮವಹಿಸಬೇಕು. ಬಾಕಿಯಿರುವ ರಿಟ್ ಪಿಟಿಷನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೀಘ್ರವೇ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರವನ್ನು ಸಲ್ಲಿಸುವಂತೆ ಸೂಚಿಸಿದರು.

ADVERTISEMENT

ಬಾಕಿಯಿರುವ ಲೋಕಾಯುಕ್ತ ಪ್ರಕರಣಗಳ ಬಾಬ್ತು ಜರೂರಾಗಿ ಲೋಕಾಯುಕ್ತರಿಗೆ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು. ಇ-ಆಫೀಸ್ ಬಾಕಿಯನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಕಚೇರಿಯ ಅಭಿಲೇಖಾಲಯ ಶಾಖೆಯನ್ನು ಪರಿಶೀಲಿಸಿ, ಯಾವುದೇ ಸಾರ್ವಜನಿಕರು ದಾಖಲಾತಿಗಳನ್ನು ಕೋರಿ ಅರ್ಜಿ ಸಲ್ಲಿಸಿದಾಗ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿಕೊಂಡೇ ದಾಖಲಾತಿಗಳನ್ನು ನೀಡತಕ್ಕದ್ದು ಹಾಗೂ ನಾಡಕಚೇರಿಗೆ ಸ್ವೀಕೃತವಾಗುದ ಯಾವುದೇ ಶುಲ್ಕವನ್ನು ಕಡ್ಡಾಯವಾಗಿ ಆಯಾ ದಿನದಂದೇ ಸರ್ಕಾರಕ್ಕೆ ಪಾವತಿಸಿ, ದಾಖಲೆಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದರು.

ಕಂದಾಯ ಇಲಾಖೆಯು ಸಾರ್ವಜನಿಕ ಇಲಾಖೆಗಳ ಮಾತೃ ಇಲಾಖೆಯಾಗಿದ್ದು, ನೌಕರರು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ನಾಗಮಂಗಲ ತಾಲ್ಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್ ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಧಾರ್ ಸೀಡಿಂಗ್, ಇ–ಪೌತಿ ಖಾತಾ ಆಂದೋಲನ, ನಮೂನೆ 1ರಿಂದ 5, ಸಕಾಲ, ನ್ಯಾಯಾಲಯಗಳ ಪ್ರಕರಣಗಳು, ಒತ್ತುವರಿ ತೆರವು, ಭೂ ಸುರಕ್ಷಾ, 11 ಇ ತಿದ್ದುಪಡಿ, ಬಗರ್ ಹುಕುಂ ಅರ್ಜಿಗಳ ವಿಲೇವಾರಿ, ಹಕ್ಕುಪತ್ರಗಳ ವಿತರಣೆಗಳ ಪ್ರಗತಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು. 

‘ಸಕಾಲದಲ್ಲಿ ಸೇವೆ ಒದಗಿಸದಿದ್ದರೆ ಶಿಸ್ತುಕ್ರಮ’

ಸಾರ್ವಜನಿಕರ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸದೆ ತುರ್ತಾಗಿ ಅರ್ಜಿಗಳ ವಿಲೇವಾರಿಯಲ್ಲಿ ಕ್ರಮವಹಿಸಬೇಕು. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಭೂಹಿಡುವಳಿ ಪ್ರಮಾಣ ಪತ್ರ ವಂಶವೃಕ್ಷ ಹಾಗೂ ಇತರೆ ಎಲ್ಲ ರೀತಿಯ ಸೇವೆಗಳನ್ನು ಸಕಾಲದಲ್ಲಿ ನಿಗದಿಪಡಿಸಿರುವ ಅವಧಿಯಲ್ಲಿಯೇ ಕಡ್ಡಾಯವಾಗಿ ಒದಗಿಸತಕ್ಕದ್ದು. ತಪ್ಪಿದ್ದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ಅವರು ನೌಕರರಿಗೆ ಎಚ್ಚರಿಕೆ ನೀಡಿದರು. ಹೋಬಳಿಯ ಎಲ್ಲ ಸಿಬ್ಬಂದಿಯು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು ಸಾರ್ವಜನಿಕರ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗುವುದು ಐಡಿ ಕಾರ್ಡ್ ಧರಿಸುವಿಕೆ ಹಾಗೂ ಇತರೆ ಪ್ರಮುಖ ಕಚೇರಿ ಕಾರ್ಯವಿಧಾನಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.