ADVERTISEMENT

₹ 30 ಲಕ್ಷಕ್ಕೆ ಬೇಡಿಕೆ; ನಾಗಮಂಗಲದಲ್ಲಿ ಆರೋಪಿಗಳ ಸೆರೆ

ಯುವಕನ ಅಪಹರಣ: ಬೆಂಗಳೂರು ತಿಲಕ್‌ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:10 IST
Last Updated 26 ಸೆಪ್ಟೆಂಬರ್ 2020, 2:10 IST
ನಾಗಮಂಗಲ ಪಟ್ಟಣದ ಲಾಡ್ಜ್‌ನಲ್ಲಿದ್ದ 7 ಜನ ಅಪಹರಣಕಾರರನ್ನು ಪೊಲೀಸರು ಬಂಧಿಸಿರುವುದು
ನಾಗಮಂಗಲ ಪಟ್ಟಣದ ಲಾಡ್ಜ್‌ನಲ್ಲಿದ್ದ 7 ಜನ ಅಪಹರಣಕಾರರನ್ನು ಪೊಲೀಸರು ಬಂಧಿಸಿರುವುದು   

ನಾಗಮಂಗಲ: ಬೆಂಗಳೂರಿನ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ಆತನ ಬಿಡುಗಡೆಗಾಗಿ ₹ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಏಳು ಆರೋಪಿಗಳನ್ನು ನಾಗಮಂಗಲ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬೆಂಗಳೂರು ವಿದ್ಯಾರಣ್ಯಪುರದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಬಂಧಿತರು. ಅವರೆಲ್ಲರನ್ನೂ ಬೆಂಗಳೂರಿನ ತಿಲಕ್‌ನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

‘ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ ನವೀನ್‌ ಎಂಬಾತನನ್ನು ಅಪಹರಿಸಿದ್ದ ಆರೋಪಿಗಳು, ಆ ಬಾಲಕನ ಸಮೇತವೇ ನಾಗಮಂಗಲಕ್ಕೆ ಬಂದಿದ್ದರು. ಸ್ಥಳೀಯ ಸ್ನೇಹಿತರ ಸಹಾಯದಿಂದ ಎಸ್‌.ಎಲ್‌.ಎನ್‌ ವಸತಿಗೃಹದಲ್ಲಿ ಎರಡು ಕೊಠಡಿ ಕಾಯ್ದಿರಿಸಿಕೊಂಡು ಉಳಿದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ನವೀನ್ ಪೋಷಕರಿಗೆ ಕರೆ ಮಾಡಿದ್ದ ಆರೋಪಿಗಳು, ’₹ 30 ಲಕ್ಷ ಕೊಟ್ಟರೆ ಮಗನನ್ನು ಬಿಡುತ್ತೇವೆ’ ಎಂದು ಬೆದರಿಸಿದ್ದರು. ಗಾಬರಿಗೊಂಡಿದ್ದ ಆರೋಪಿಗಳು, ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ಸ್ವಲ್ಪ ಹಣ ಹಾಕಿದ್ದರು. ಉಳಿದ ಹಣ ಕೊಡುವುದಾಗಿ ಹೇಳಿದ್ದ ಪೋಷಕರು, ನವೀನ್‌ನನ್ನು ಬಿಡುವಂತೆ ಕೋರಿದ್ದರು.’

‘ನವೀನ್‌ನನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಬಳಿಕವೇ ಬಾಲಕ, ಪೋಷಕರಿಗೆ ಕರೆ ಮಾಡಿ ನಾಗಮಂಗಲದಲ್ಲಿ ಇರುವುದಾಗಿ ಹೇಳಿದ್ದ. ಆ ಬಗ್ಗೆ ಪೋಷಕರು, ತಿಲಕ್‌ನಗರ ಠಾಣೆಗೆ ಮಾಹಿತಿ ನೀಡಿದ್ದರು.ಅಲ್ಲಿಯ ಪೊಲೀಸರಿಂದ ಮಾಹಿತಿ ಬರುತ್ತಿದ್ದಂತೆ ಪಿಎಸ್‌ಐ ರವಿಕಿರಣ್‌ ನೇತೃತ್ವದ ತಂಡ, ವಸತಿ ಗೃಹದ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ. ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.