ಮಂಡ್ಯ: ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ದುದ್ದ ಪಂಚಾಯಿತಿ ಪಿಡಿಒ ಅವರನ್ನು ಕೆಲಸದಿಂದ ವಜಾಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಇಲ್ಲಿನ ಪಿಡಿಒ ಅವರು ತಮ್ಮ ಸ್ವಂತ ಜಮೀನಿನ ಕೆಲಸ ಮಾಡಿಕೊಂಡಿರುವುದು ಜೀತಕ್ಕೆ ಸಮಾನಾಗಿರುವುದೆ. ಭತ್ತದ ಹೊರೆಗಳನ್ನು ಪಂಚಾಯಿತಿ ನೌಕರರ ತೆಲೆ ಮೇಲೆ ಹೊತ್ತುಕೊಂಡು ಹೋಗುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದೆ. ಇದರಿಂದ ಸಿಬ್ಬಂದಿ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಆರೋಪಿಸಿದರು.
ಬಾಕಿ ವೇತನ ನೀಡಬೇಕು. ಇಎಫ್ಎಂಎಸ್ ಹಾಜರಾತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಪಿಡಿಒ ಸಿಬ್ಬಂದಿಗೆ ಸಂಬಳ ಕೊಡದೇ ಸತಾಯಿಸುವುದನ್ನು ನಿಲ್ಲಿಸಬೇಕು. ‘ಜ್ಯೇಷ್ಠತೆ’ ಆಧಾರದ ಮೇಲೆ ಪಂಚಾಯಿತಿಯಲ್ಲಿ ಬಡ್ತಿ ನೀಡುವುದು ಮುಖ್ಯವಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಬಸವರಾಜು, ಕೆ.ಎನ್.ಆನಂದ್ರಾವ್, ರಾಜಶೇಖರ್, ಬೋರೇಗೌಡ, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.