ADVERTISEMENT

ಹೊಂಡಗಳ ಮಧ್ಯೆ ಮದ್ದೂರು- ಕೊಪ್ಪ ಮುಖ್ಯ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ

ಬಿ.ಎ.ಮಧುಕುಮಾರ
Published 6 ಮಾರ್ಚ್ 2021, 3:30 IST
Last Updated 6 ಮಾರ್ಚ್ 2021, 3:30 IST
ಕೊಪ್ಪ ಹೋಬಳಿಯ ಬೆಸಗರಹಳ್ಳಿ ಅಡ್ಡರಸ್ತೆ ಗ್ರಾಮದ ಬಳಿ ರಸ್ತೆ ಗುಂಡಿ ಬಿದ್ದಿರುವ ದೃಶ್ಯ
ಕೊಪ್ಪ ಹೋಬಳಿಯ ಬೆಸಗರಹಳ್ಳಿ ಅಡ್ಡರಸ್ತೆ ಗ್ರಾಮದ ಬಳಿ ರಸ್ತೆ ಗುಂಡಿ ಬಿದ್ದಿರುವ ದೃಶ್ಯ   

ಕೊಪ್ಪ: ಕೊಪ್ಪ ಗ್ರಾಮದಿಂದ ಮದ್ದೂರು ಪಟ್ಟಣ ಸಂಪರ್ಕಿಸುವ ಸುಮಾರು 20 ಕಿ.ಮೀ.ಯ ರಾಜ್ಯ ಹೆದ್ದಾರಿ ಗುಂಡಿಗಳಿಂದ ತುಂಬಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯು ನಾಗಮಂಗಲ–ಮಂಡ್ಯ-ಯಡಿಯೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ.

ರಸ್ತೆಯುದ್ದಕ್ಕೂ ಗುಂಡಿಗಳಿದ್ದು, ವಾಹನ ಸವಾರರು ಪ್ರತಿ ದಿನ ಬಿದ್ದು ಗಾಯಗೊಳ್ಳುತ್ತಿದ್ದಾರೆ. 6 ತಿಂಗಳಿಂದ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಬೆಳತೂರು ಗೇಟ್, ಬೆಸಗರಹಳ್ಳಿ ಅಡ್ಡರಸ್ತೆ, ಅರೆಕಲ್ದೊಡ್ಡಿ ಗೇಟ್, ಗೊಲ್ಲರದೊಡ್ಡಿ ಗ್ರಾಮಗಳ ಬಳಿ ಹೆಚ್ಚು ಗುಂಡಿಗಳಿದ್ದು ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ಮತ್ತೊಂದು ಗುಂಡಿಗೆ ಬೀಳುತ್ತವೆ.

ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳು ಇದೇ ಮಾರ್ಗವಾಗಿ ಸಂಚರಿಸಿದರೂ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನಹರಿಸಿಲ್ಲ. ನಾಗಮಂಗಲ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರುವ ರಸ್ತೆ ಇದಾಗಿದ್ದು, ಎರಡೂ ಕ್ಷೇತ್ರಗಳ ಶಾಸಕರು ಅಭಿವೃದ್ಧಿಗೆ ಗಮನಹರಿಸಬೇಕು ಎಂದು ರೈತ ಸಂಘದ ಮುಖಂಡರಾದ ಗೊಲ್ಲರದೊಡ್ಡಿ ಅಶೋಕ, ಕೀಳಘಟ್ಟ ನಂಜುಂಡಯ್ಯ, ಪಣ್ಣೆದೊಡ್ಡಿ ವೆಂಕಟೇಶ್ ಒತ್ತಾಯಿಸಿದರು.

ಕೊಪ್ಪ, ಮದ್ದೂರು ಮುಖ್ಯ ರಸ್ತೆ ಸೇರಿದಂತೆ ಇತರ 5 ರಸ್ತೆಗಳ ಅಭಿ ವೃದ್ಧಿಗಾಗಿ ₹ 28.8 ಕೋಟಿ ಪ್ಯಾಕೇಜ್ ಮಂಜೂರಾಗಿತ್ತು. ಅದರಲ್ಲಿ ಕೊಪ್ಪ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಬಳಿ 3 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಉಳಿದ ರಸ್ತೆ ಅಭಿ ವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ತಕ್ಷಣ ಕಾಮಗಾರಿ ಪ್ರಾರಂಭಿಸಿ ರಸ್ತೆ ಅಭಿ ವೃದ್ಧಿಪಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿ ಯರ್ ಮಹಾದೇವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.