ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಬಳಿ ಇರುವ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಭತ್ತ ಮತ್ತು ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರಿಗೆ ಆದ್ಯತೆ ನೀಡದೆ ದಲ್ಲಾಳಿಗಳ ಪರವಾಗಿದ್ದು, ಕಳೆಪ ಗುಣಮಟ್ಟದ ರಾಗಿ ಖರೀದಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಹಾಮಂಡಳ ದಲ್ಲಾಳಿಗಳ ಪರವಾಗಿರುವುದರಿಂದ ರೈತರ ಬೆಳೆ ಖರೀದಿಗೆ ವಿಳಂಬ ಮಾಡಲಾಗುತ್ತಿದೆ. ಲಾರಿ ಮತ್ತು ದೊಡ್ಡ ಗೂಡ್ಸ್ ವಾಹನಗಳಲ್ಲಿ 100, 200 ಕ್ವಿಂಟಲ್ ಭತ್ತ, ರಾಗಿ ತುಂಬಿಕೊಂಡು ಬರುತ್ತಾರೆ. ಆದರೆ, ರೈತರು 10–20ಕ್ವಿಂಟಲ್ ತರುತ್ತಾರೆ. ದಲ್ಲಾಳಿಗಳ ಭತ್ತ, ರಾಗಿ ಖರೀದಿಗೆ ಆದ್ಯತೆ ದೊರೆಯುತ್ತಿದ್ದು, ರೈತರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ರೈತರು 3–4ದಿನ ಕಾಯುವ ಸ್ಥಿತಿ ನಿರ್ಮಾಣವಾಗಿ ವಾಹನದ ಬಾಡಿಗೆ ಕೂಡ ದುಪ್ಪಟ್ಟಾಗಿ ನಷ್ಟ ಅನುಭವಿ ಸಬೇಕಿದೆ ಎಂದು ಕಿಡಿಕಾರಿದರು.
ಖರೀದಿ ಕೇಂದ್ರಕ್ಕೆ ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ ಟ್ರಾನ್ಸ್ಪೋರ್ಟ್, ಕಾರ್ಮಿಕರ ಸಮಸ್ಯೆ ಬಗ್ಗೆ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು. ಹೋಬಳಿಗೊಂದು ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಲಾಗುವುದು ಎಂದರು.
ತಹಶೀಲ್ದಾರ್ ಕೆ.ಸಿ.ಸೌಮ್ಯ ಪರಿಶೀಲನೆ ನಡೆಸಿ ರೈತರಿಗೆ ತೊಂದರೆ ಯಾಗದಂತೆ ಕ್ರಮವಹಿಸುವಂತೆ ಮಹಾಮಂಡಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.