ಮಂಡ್ಯ: ಜಿಲ್ಲೆಯಲ್ಲಿ ಗುರುತಿಸಿರುವ 802 ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಗಳಿಗೆ ತಲಾ ಐದು ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ಎಂ.ವಿ.ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು, ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟರು.
ಜಿಲ್ಲೆಯಲ್ಲಿ ಹೊಸದಾಗಿ ನಗರಸಭೆ, ಪುರಸಭೆ ಗ್ರಾಮ ಪಂಚಾಯಿತಿಗಳಲ್ಲಿ ಸ್ವಯಂ ಘೋಷಣಾ ನಮೂನೆ ಮೂಲಕ ಅರ್ಜಿ ಸಲ್ಲಿಸಿರುವ 700 ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಕುಟುಂಬಳೆಂದು ಪರಿಗಣಿಸಿ ₹40 ಸಾವಿರ ಒಟಿಎ ಹಣ ಮತ್ತು ಐಡಿ ಕಾರ್ಡ್ ವಿತರಣೆ ಮಾಡಬೇಕು’ ಎಂದು ಆಗ್ರಹಿಸಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಫಾಯಿ ಕರ್ಮಚಾರಿಗಳಿಗೆ ನಿವೇಶನ ರಹಿತರಿಗೆ ಮಾತ್ರ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಹೋಬಳಿ, ಮೊಗರಹಳ್ಳಿ ಸ.ನಂ.126 ರಲ್ಲಿ 11.29 ಎಕೆರೆಯನ್ನು ಆಶ್ರಯ ನಿವೇಶನಕ್ಕಾಗಿ ಮಂಜೂರು ಮಾಡಿರುವ ಸರ್ಕಾರಿ ಸಮೀನಿನಲ್ಲಿ ನಿವೇಶನ ಅಥವಾ ಮನೆಗಳನ್ನು ಕಟ್ಟಿಸಿಕೊಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
‘ನಗರಸಭೆ ಮತ್ತು ಪುರಸಭೆಗಳಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಾದ ಲೋಡರ್ಸ್, ಸಹಾಯಕರು, ಚಾಲಕರು, ವಾಟರ್ ಮ್ಯಾನ್ಗಳನ್ನು ಕೂಡಲೇ ನೇರ ಪಾವತಿ ಅಡಿ ನೇಮಕ ಮಾಡಲು ಕ್ರಮ ವಹಿಸಬೇಕು. ನೀವೇಶನರಹಿತರಿಗೆ ನಿವೇಶನ ನೀಡಬೇಕು. ಜೊತೆಗೆ 3 ತಿಂಗಳೊಳಗೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮಕ್ಕಳೆಲ್ಲರೂ ಶಿಕ್ಷಣ ಮುಗಿಸಿ ನಿರುದ್ಯೋಗಿಗಳಾಗಿದ್ದರೆ ಅವರನ್ನು ಗುರುತಿಸಿ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಸಫಾಯಿ ಕರ್ಮಚಾರಿಗಳಿಗೆ ತುಂಡು ಗುತ್ತಿಗೆ ನೀಡಿ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆರ್.ಕೃಷ್ಣ, ಗೌರವಾಧ್ಯಕ್ಷ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷೆ ನಾಗಮಣಿ, ಉಪಾಧ್ಯಕ್ಷ ಆರ್.ನಾಗರಾಜು, ಮುಖಂಡರಾದ ಪಳನಿ, ಅವನಾಸಿ, ವಿಜಯ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.