
ಮಳವಳ್ಳಿ: ಹನಿ ನೀರಾವರಿ ಪದ್ಧತಿಯಿಂದ ನೀರು ಮತ್ತು ಶ್ರಮ ಉಳಿತಾಯದ ಜೊತೆಗೆ ಅತ್ಯಧಿಕ ಇಳುವರಿ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಬೆಳೆಯಲು ಸಾಧ್ಯ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ತಿಳಿಸಿದರು.
ತಾಲ್ಲೂಕಿನ ಮಲಿಯೂರು ಗ್ರಾಮದಲ್ಲಿ ಕೃಪಿ ಇಲಾಖೆ, ನೀರಾವರಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ವತಿಯಿಂದ ಪೂರಿಗಾಲಿ ಸಂಪೂರ್ಣ ಸ್ವಯಂಚಾಲಿತ ತುಂತುರು ಹಾಗೂ ಹನಿ ನೀರಾವರಿ ಯೋಜನೆಯಡಿ ಆಯೋಜಿಸಿದ ರೈತರ ಮಾಹಿತಿ ಶಿಬಿರದಲ್ಲಿ ಅವರು ಮಾನಾಡಿದರು.
‘ತಾಲ್ಲೂಕಿನ ಬೊಪ್ಪೇಗೌಡನಪುರ ಹೋಬಳಿ ಸೇರಿದಂತೆ 51 ಗ್ರಾಮಗಳ 25,327 ಎಕರೆ ಕೃಷಿ ಭೂಮಿಗೆ ಕಾವೇರಿ ನದಿಯಿಂದ ನೀರುಣಿಸುವ ಅತಿ ದೊಡ್ಡ ಏತ ನೀರಾವರಿ ಯೋಜನೆಯ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಹನಿ, ತುಂತುರು ನೀರಾವರಿ ಪದ್ಧತಿ ಮತ್ತು ಆಟೋಮೇಶನ್ ತಂತ್ರಜ್ಞಾನವನ್ನು ಬಳಸಿ, ನೀರು ಪೋಲಾಗುವುದನ್ನು ತಪ್ಪಿಸಿ ಸಮಾನ ಹಂಚಿಕೆ ಮೂಲಕ ಸಾಮೂಹಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು’ ಎಂದು ಹೇಳಿದರು.
‘ಇದು ಅತೀ ದೊಡ್ಡ ಸಂಪೂರ್ಣ ಸ್ವಯಂ ಚಾಲಿತ ಹನಿ ನೀರಾವರಿ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ರಚನೆ ಮಾಡಿ ಸಾಮೂಹಿಕವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನಿರೀಕ್ಷೆಗೂ ಮೀರಿ ಕೃಷಿ ಲಾಭದಾಯಕವಾಗುವುದು. ಅಲ್ಲದೆ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು ಉತ್ಪನ್ನಗಳನ್ನು ಖರೀದಿ ಮಾಡುತ್ತದೆ. ಇದು ಕೇವಲ ನೀರಾವರಿ ಯೋಜನೆ ಮಾತ್ರವಲ್ಲ, ತಂತ್ರಜ್ಞಾನ ಆಧಾರಿತ ಕೃಷಿ ಕ್ರಾಂತಿಯಾಗಿ ರೈತರ ಬದುಕಿಗೆ ಹೊಸ ದಿಕ್ಕೂಚಿ ಆಗುತ್ತದೆ. ಈ ಯೋಜನೆಯು ಸಾಮೂಹಿಕ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬುತ್ತದೆ’ ಎಂದು ಅಭಿಪ್ರಾಯಪಟ್ಟರು.
ತೋಟಗಾರಿಕೆಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡಿ, ‘ಸಾಮೂಹಿಕ ಕೃಷಿ ಪದ್ಧತಿಯೊಂದಿಗೆ ಸಾವಯವ ನಿಯಮವನ್ನು ಅಳವಡಿಸಿಕೊಳ್ಳುವ ಮೂಲಕ ರೈತರ ಸದೃಢರಾಗಬಹುದು’ ಎಂದು ಕರೆ ನೀಡಿದರು.
ಜೈನ್ ಇರ್ರಿಗೇಷನ್ ಸಂಸ್ಥೆಯ ಎಂಜಿನಿಯರ್ ರಾಘವೇಂದ್ರ, ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ನಾರಾಯಣಿ, ಸಿದ್ದಮಾದಶೆಟ್ಟಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.