ADVERTISEMENT

ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ನಿವೃತ್ತ ಡಿವೈಎಸ್‌ಪಿ ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 12:05 IST
Last Updated 29 ಡಿಸೆಂಬರ್ 2020, 12:05 IST

ಮಂಡ್ಯ: ಈಚೆಗೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಡಿವೈಎಸ್‌ಪಿ ಹನುಮಂತಪ್ಪ ಅವರು ಕೊಲೆ ಪ್ರಕರಣವೊಂದರಲ್ಲಿ ಮಳ್ಳವಳ್ಳಿ ತಾಲ್ಲೂಕು, ಬೆಳಕವಾಡಿ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಕಳೆದ ಅ.28ರಂದು ಶಿವನಸಮುದ್ರದ ಬಳಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ವಿಚಾರಣೆ ನಡೆಸಿದಾಗ ಮೃತ ಮಹಿಳೆಯು ಮೈಸೂರಿನ ಲಷ್ಕರ್‌ ಪೊಲೀಸ್‌ ಠಾಣೆಯ ಡಿ ದರ್ಜೆ ಕಾರ್ಮಿಕರಾದ ಸರಸ್ವತಿ (45) ಎಂಬುದು ಪತ್ತೆಯಾಗಿತ್ತು.

ಅದೇ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದ ಹನುಮಂತರಾಯಪ್ಪ ಸರಸ್ವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಹನುಮಂತಪ್ಪ ಅವರಿಗೆ ಒಮ್ಮೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗಿತ್ತು. ಮತ್ತೊಮ್ಮೆ ವಿಚಾರಣೆ ಹಾಜರಾಗುವಂತೆ ಸೂಚಿಸಲಾಗಿತ್ತು. ಬಂಧನದ ಭೀತಿಯಲ್ಲಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

ADVERTISEMENT

‘ಮೊದಲ ಬಾರಿ ವಿಚಾರಣೆ ನಡೆಸಿದಾಗ ಹನುಮಂತಪ್ಪ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ವಿಚಾರಣೆ ಮುಂದುವರಿಸಿದಾಗ ಅವರ ವಿರುದ್ಧ ಸಾಕಷ್ಟು ಅನುಮಾನ ಬಂದಿದ್ದವು. ಮತ್ತೊಮ್ಮೆ ವಿಚಾರಣೆಗೆ ಕರೆಸಬೇಕು ಎನ್ನುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.