ADVERTISEMENT

ಎಡಪಂಥೀಯ ವಿಚಾರದಲ್ಲಿ ಶಿಸ್ತು, ಬದ್ಧತೆ: ಮಂಡ್ಯ ರಮೇಶ್‌ ಅಭಿಮತ

ಯುವಸಂಜೆ ಕಾರ್ಯಕ್ರಮಕ್ಕೆ ಚಾಲನೆ; ನಟ, ನಿರ್ದೇಶಕ ಮಂಡ್ಯರಮೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 14:44 IST
Last Updated 28 ಫೆಬ್ರುವರಿ 2021, 14:44 IST
ಎಂಪ್ಟಿ ಪಾಕೆಟ್‌ ಡ್ರೀಮ್ಸ್‌ ಸಂಸ್ಥೆ ಆಯೋಜಿಸಿದ್ದ ಯುವಸಂಜೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಮಂಡ್ಯರಮೇಶ್‌ ಮಾತನಾಡಿದರು
ಎಂಪ್ಟಿ ಪಾಕೆಟ್‌ ಡ್ರೀಮ್ಸ್‌ ಸಂಸ್ಥೆ ಆಯೋಜಿಸಿದ್ದ ಯುವಸಂಜೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಮಂಡ್ಯರಮೇಶ್‌ ಮಾತನಾಡಿದರು   

ಮಂಡ್ಯ: ‘ಎಡಪಂಥೀಯ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಶಿಸ್ತು, ಕ್ರಮ ಹಾಗೂ ಬದ್ಧತೆ ನಮ್ಮದಾಗುತ್ತದೆ. ಆ ವಿಚಾರಗಳನ್ನು ಇಷ್ಟಪಟ್ಟರೆ, ಮಾತನಾಡಿದರೆ, ಬೋಧಿಸಿದರೆ ಅದೇ ಉಸಿರಾಗುತ್ತದೆ’ ಎಂದು ನಟ, ನಿರ್ದೇಶಕ ಮಂಡ್ಯ ರಮೇಶ್‌ ಹೇಳಿದರು.

ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆ ವತಿಯಿಂದ ಭಾನುವಾರ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ‘ಯುವ ಸಂಜೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಡಪಂಥೀಯ ವಿಚಾರಗಳು ಇಷ್ಟವಾಗುತ್ತವೆ ಎಂದರೆ ನಾವು ಯಾವುದೇ ಎಡಪಕ್ಷಕ್ಕೆ ಸೇರಿದವರು ಎಂಬ ಅರ್ಥವಲ್ಲ. ಕಲಾವಿದರಿಗೆ ಯಾವುದೇ ಪಕ್ಷಗಳಿರುವುದಿಲ್ಲ. ರಾಜಕಾರಣಿಗಳು, ಸ್ವಾಮೀಜಿಗಳು ನಮ್ಮ ನಾಟಕದಲ್ಲಿ ತಮಾಷೆಯ ವಸ್ತುವಾಗುತ್ತಾರೆ, ರಂಗಭೂಮಿಯಲ್ಲಿ ಅದು ಸಾಧ್ಯವಿದೆ. ಉತ್ತಮ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಕೆಲಸವಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಶಿಸ್ತು, ಕ್ರಮ ಪಾಲಿಸಿದರೆ ಮಕ್ಕಳಲ್ಲಿ ಹೊಸ ಹೊಳವುಗಳು ಹುಟ್ಟುತ್ತವೆ’ ಎಂದರು.

ADVERTISEMENT

‘ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆ ಕಟ್ಟಿರುವ ವಿನಯ್‌ಕುಮಾರ್‌ ಬಗ್ಗೆ ಬಹಳ ಸಂತೋಷವಿದೆ. ಮಂಡ್ಯದಲ್ಲಿ ಚಲಚಿತ್ರ, ಕಿರುಚಿತ್ರ ನಿರ್ಮಾಣ, ರಂಗತರಬೇತಿ ಚಟುವಟಿಕೆಗಳು ಈ ಸಂಸ್ಥೆಯಿಂದ ಹೆಚ್ಚಾಗಲಿ. ಹಿರಿಯ ತಲೆಮಾರಿನವರು ಮಾಡಿದ ರಂಗ ಕಾರ್ಯಗಳಿಂದ ನಾವು ರಂಗಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುವಂತಾಯಿತು. ವಿನಯ್‌ ಕುಮಾರ್‌ ಅವರ ಸಂಸ್ಥೆ ಹಾಗೂ ಮಂಡ್ಯದ ಹೆಸರು ಮತ್ತಷ್ಟು ಎತ್ತರಕ್ಕೇರಲಿ’ ಎಂದು ಹಾರೈಸಿದರು.

ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಶಿಕ್ಷಣ ಇಲ್ಲದ ಕಾಲದಲ್ಲಿ ದೇಶ ಬಹಳ ಚೆನ್ನಾಗಿತ್ತು. ಶಿಕ್ಷಣವಂತರು ಬಡವರಿಗೆ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಬೇಕು. ಹಿಂದಿನ ಕಾಲದಲ್ಲಿ ಜನರಿಗೆ ಕಡಿಮೆ ಶಿಕ್ಷಣವಿತ್ತು, ಆದರೆ ಹೆಚ್ಚು ಜನೋಪಯೋಗಿ ಕೆಲಸಗಳು ನಡೆಯುತ್ತಿದ್ದವು. ಜ್ಞಾನ ಕಡಿಮೆ ಇದ್ದರೂ ಸಾಮಾನ್ಯ ಜ್ಞಾನ, ಸಾಮಾಜಿಕ ಕಳಕಳಿಗೆ ಕೊರತೆ ಇರಲಿಲ್ಲ’ ಎಂದರು.

‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲ ಯುವಜನರಲ್ಲಿ ಇರಬೇಕು. ಆದರೆ ಇಂದು ಹೆಚ್ಚು ಶಿಕ್ಷಣ ಪಡೆದವರು ಅಪಾರ ಮಂದಿ ಇದ್ದಾರೆ. ಆದರೆ ಅವರಿಗೆ ಸಾಮಾಜಿಕ ಕಳಕಳಿ, ಬದ್ಧತೆ ಇಲ್ಲವಾಗಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಶಿಕ್ಷಣವಂತರು ಹೆಚ್ಚಾದಂತೆಲ್ಲಾ ಕಾನೂನು ಪರಿಪಾಲನೆ ಚೆನ್ನಾಗಿ ಆಗಬೇಕಾಗಿತ್ತು. ಆದರೆ ಶಿಕ್ಷಣವಂತರೇ ಕಾನೂನು ಪಾಲನೆ ಮಾಡುತ್ತಿಲ್ಲ. ಶಿಕ್ಷಣವೊಂದಿದ್ದರೆ ಸಾಲದು, ಅದರ ಜೊತೆ ಸಾಮಾನ್ಯ ಜ್ಞಾನವೂ ಬೆಳೆಯಬೇಕು. ಹಾಗಿದ್ದರೆ ಮಾತ್ರ ಸಮಾಜದ ಬಗ್ಗೆ ಕಳಕಳಿ ಬೆಳೆಯಲು ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು, ಕಾಂಗ್ರೆಸ್‌ ಮುಖಂಡ ಗಣಿಗ ರವಿ, ರಂಗಕರ್ಮಿ ಯೋಗೇಶ್‌ ಮೇಷ್ಟ್ರು ಇದ್ದರು.

ಸಂಗೀತ ಪ್ರಸ್ತುತಿ, ಕಾವ್ಯ ಒಂದು-ನಾಲಿಗೆ ನುಲಿ, ಮಂಡ್ಯ ಫಿಲಂ ಸೊಸೈಟಿಗೆ ಮರುಚಾಲನೆ, ಫುಟ್ಬಾಲ್ ಕುರಿತು ಕಿರುಚಿತ್ರ ಪ್ರದರ್ಶನ, ಗುಡಿಸಲ ಜ್ಯೋತಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.