ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಪಂಚಾಯಿತಿ ಸದಸ್ಯ ಬೆಟ್ಟ ದಾಸೇಗೌಡ ಚಾಲನೆ ನೀಡಿದರು. ಈಶ್ವರ್, ಮಂಚೇಗೌಡ, ಗವಿಸಿದ್ದಯ್ಯ, ಕೆಂಚಪ್ಪ, ಶ್ರೀನಿವಾಸ್, ಅಪ್ಪಾಜಿ, ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಕುಮಾರ್ ಭಾಗವಹಿಸಿದ್ದರು
ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಪಂಚಾಯಿತಿ ಸದಸ್ಯ ಬೆಟ್ಟ ಸ್ವಾಮಿಗೌಡ ಚಾಲನೆ ನೀಡಿದರು.
‘ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿಯೇ ಇರಲಿಲ್ಲ. ಪಡಿತರಕ್ಕಾಗಿ ನಮ್ಮೂರ ಜನರು 2 ಕಿ.ಮೀ.ದೂರದ ದೊಡ್ಡ ಹೊಸಗಾವಿ ಗ್ರಾಮಕ್ಕೆ ಹೋಗಿ ಪಡಿತರ ತರುವ ಅನಿವಾರ್ಯತೆಯಿತ್ತು’ ಎಂದರು.
‘ನಮ್ಮೂರಿಗೆ ಹಿಂದಿನಿಂದಲೂ ಸಾರಿಗೆ ಬಸ್ ಬರುವುದಿಲ್ಲ, ರೈತರು, ಕೂಲೀಕಾರರು ವೃದ್ಧರಿಗೆ ಬಿಸಿಲು, ಮಳೆಯೆನ್ನದೆ ಪಡಿತರ ತರಲು ಪರದಾಡುವ ಪರಿಸ್ಥಿತಿಯಿತ್ತು. ಏಕೆಂದರೆ ಎಷ್ಟೋ ಬಾರಿ ಪಡಿತರ ಮತ್ತೆ ಬನ್ನಿ, ಎಂದು ನ್ಯಾಯಬೆಲೆ ಅಂಗಡಿಯವರು ಹೇಳಿದಾಗ ಮತ್ತೊಂದು ದಿನ ನಡೆದು ಹೋಗುತ್ತಿದ್ದರು’ ಎಂದು ಸಮಾಜ ಸೇವಕ ಬಿ. ಎಸ್ ಗೌಡ ತಿಳಿಸಿದರು.
‘ ನಮ್ಮೂರಿಗೆ ಹೇಗಾದರೂ ಮಾಡಿ ನ್ಯಾಯ ಬೆಲೆ ಅಂಗಡಿಯನ್ನು ತರಲೇಬೇಕೆಂದು ಪಣ ತೊಟ್ಟ ಪಂಚಾಯಿತಿ ಸದಸ್ಯ ಬೆಟ್ಟ ದಾಸೇಗೌಡರವರು ಜಿಲ್ಲಾಧಿಕಾರಿ, ತಹಶೀಲ್ದಾರ್, ಆಹಾರ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಸಮಸ್ಯೆಯನ್ನು ತಿಳಿಸಿ, ಶ್ರಮ ಹಾಕಿದ ಪರಿಣಾಮ ನ್ಯಾಯಬೆಲೆ ಅಂಗಡಿ ಆರಂಭವಾಗಿದೆ’ ಎಂದರು.
ನೂತನ ನ್ಯಾಯಬೆಲೆ ಅಂಗಡಿ ನಿರ್ಮಾಣಕ್ಕೆ ಪಂಚಾಯಿತಿ ಅನುದಾನ ದಲ್ಲಿ ₹3 ಲಕ್ಷ ಸೇರಿದಂತೆ ಬೆಟ್ಟದಾಸೇ ಗೌಡರವರು ತಮ್ಮ ಗೌರವಧನ ₹2 ಲಕ್ಷ ಸೇರಿಸಿ ಒಟ್ಟು ₹5ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಗ್ರಾಮದಲ್ಲಿ ಆರಂಭವಾಗಿದೆ.
‘ಪಡಿತರಗಳಿಗೆ 2 ಕಿ. ಮೀ ದೂರದ ಬೇರೆ ಗ್ರಾಮಕ್ಕೆ ನಡೆದುಕೊಂಡು ಹೋಗಿ ಹೋಗುವ ಪರದಾಟ ತಪ್ಪಿದೆ. ಪಂಚಾಯಿತಿ ಸದಸ್ಯರಾದ ಬಿ.ಎಸ್. ಗೌಡ ರ ಶ್ರಮವನ್ನು ನೆನೆಯುತ್ತೇವೆ’ ಎಂದು ಗ್ರಾಮದ ಚೆನ್ನಮ್ಮ ನುಡಿದರು.
ಮುಖಂಡರಾದ ಈಶ್ವರ್, ಮಂಚೇಗೌಡ, ಗವಿಸಿದ್ದಯ್ಯ, ಕೆಂಚಪ್ಪ, ಶ್ರೀನಿವಾಸ್, ಅಪ್ಪಾಜಿ,ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಕುಮಾರ್ ಸೇರಿದಂತೆ ಗ್ರಾಮಸ್ಥರು ಸ್ಥಳದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.