ಭಾರತೀನಗರ: ಸರ್ಕಾರದಿಂದ ಬರುವ ಸಹಾಯಧನ ಸೇರಿದಂತೆ ಯಾವುದೇ ಸಾಲ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಹಲಗೂರು ರಸ್ತೆಯಲ್ಲಿರುವ ಎಸ್ಬಿಐ ಶಾಖೆಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತರಿಗೆ ಸಾಲ- ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕು. ಜೊತೆಗೆ ಬ್ಯಾಂಕ್ಗೆ ಕೂಡಲೇ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.
‘ಮುದ್ರಾ ಯೋಜನೆ, ಇ-ಮುದ್ರಾ, ಹೈನುಗಾರಿಕೆ, ಕುರಿ–ಕೋಳಿ, ಎತ್ತುಗಾಡಿ, ಗೃಹ ನಿರ್ಮಾಣ, ಜೀವನಾಂಶಕ್ಕಾಗಿ ಹೊಸ ಸಾಲ, ಸರ್ಕಾರದಿಂದ ಬರುವಂತಹ ಪ್ರೋತ್ಸಾಹ ಧನ ಸೇರಿದಂತೆ ಇತರೆ ಯಾವುದೇ ಸರ್ಕಾರದಿಂದ ಮಂಜೂರಾಗುವ ಸಹಾಯಧನ ಸೌಲಭ್ಯಗಳನ್ನು ನೀಡುತ್ತಿಲ್ಲ. ಇದರ ಜೊತೆಗೆ ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಬರುವ ಆರ್ಥಿಕ ಸೌಲಭ್ಯಗಳನ್ನು ಸಾಲಕ್ಕೆ ವಜಾ ಮಾಡಿಕೊಳ್ಳಬಾರದು’ ಎಂದು ಒತ್ತಾಯಿಸಿದರು.
ಮ್ಯಾನೇಜರ್ ಸಿ.ವಾಣಿ ಮಾತನಾಡಿ, ‘ನಮ್ಮ ಶಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ನಮ್ಮ ಮೇಲಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಫಲಾನುಭವಿಗಳಿಗೆ ಸರ್ಕಾರ ನೀಡುವಂತಹ ಸಹಾಯನುಧನ ಸೌಲಭ್ಯಗಳನ್ನು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿಲ್ಲ’ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಗೌರವ ಅಧ್ಯಕ್ಷ ಸಾದೊಳಲು ಪುಟ್ಟಸ್ವಾಮಿ, ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಜಿ.ಎ.ಶಂಕರ್, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಲಿಂಗಪ್ಪಾಜಿ, ಖಜಾಂಚಿ ಶೆಟ್ಟಹಳ್ಳಿ ರವಿಕುಮಾರ್, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ದೊಡ್ಡರಸಿನಕೆರೆ ಮರಿಸ್ವಾಮಿ, ಸಿದ್ದರಾಮು, ಕೆ.ಸಿ. ಮಾದೇಗೌಡ, ಅಣ್ಣೂರು ಸಿದ್ದು, ಕುಮಾರ್, ಹೊನ್ನಾಯಕನಹಳ್ಳಿ ವಿಜಯಕುಮಾರ್, ಸಿದ್ದರಾಜು, ಮಲ್ಲೇಶ್, ಮಾದರಹಳ್ಳಿ ದೇಸೀಗೌಡ, ಜಯಮ್ಮ, ಗೀತಾ, ದಯಾನಂದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.