
ಮಂಡ್ಯ: ‘ಸ್ವಾತಂತ್ರ್ಯ ಹೋರಾಟಗಾರರು ಕಂಡಿದ್ದ ಕನಸಿನ ಭಾರತವನ್ನು ಹೋರಾಟ ಮಾಡಿಯೇ ಉಳಿಸಿಕೊಳ್ಳಬೇಕಿದೆ. ಗಾಂಧೀಜಿ ಅವರ ಸ್ವಾತಂತ್ರ್ಯ ಭಾರತ ಯಾವುದಾಗಿತ್ತು ಎಂದರೆ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ, ನೈತಿಕ ಸ್ವಾತಂತ್ರ್ಯ ಸಿಗಬೇಕೆನ್ನುವ ಆಶಯ ಹಾಗೂ ಕಲ್ಪನೆಯಾಗಿತ್ತು’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಹೇಳಿದರು.
ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಆರಂಭವಾದ ‘ಸತ್ಯಶೋಧನೆ–100’ ಗಾಂಧೀಜಿ ಎಂಬ ವರ್ತಮಾನ ಮೂರು ದಿನಗಳ ಚಿಂತನ– ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಗಾಂಧೀಜಿ ಅವರ ಪರಿಕಲ್ಪನೆ ನನಸಾಗಬೇಕಾದರೆ ಅವರ ಕಲ್ಪನೆಯತ್ತ ಹೋಗಬೇಕಿದೆ. 70 ವರ್ಷಗಳಿಂದ ರಾಜಕಾರಣ ನೋಡಿದರೆ ಕೇವಲ ಅಧಿಕಾರ ಕಸಿಯುವುದರಲ್ಲೇ ನಿಂತಿದ್ದು, ಕೇವಲ ಅಧಿಕಾರ ಹಿಡಿಯುವುದರಲ್ಲಿಯೇ ತಲ್ಲೀನವಾಗಿ ಸಮಾಜವನ್ನು ಮತ್ತು ಯುವಕರನ್ನು ಒಡೆಯುವ ಕೆಲಸದಲ್ಲಿ ನಿಂತಿದ್ದಾರೆ. ಗಾಂಧಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವುದೇ ಆಗಿದೆ’ ಎಂದು ವಿಷಾದಿಸಿದರು.
‘ಒಡೆಯುವ ಶಕ್ತಿಗಳಿಗೆ ಪ್ರತ್ಯುತ್ತರವಾಗಿ ಕೊಡಬೇಕಿರುವುದು ಪ್ರೀತಿ ಅಷ್ಟೇ ಆಗಿದೆ. ಅಹಿಂಸೆ ಎನ್ನುವಾಗ ಎಲ್ಲರನ್ನೂ ಪ್ರೀತಿಸುವುದೇ ನಿಜವಾದ ಅಹಿಂಸೆ, ಇದನ್ನು ಗಾಂಧೀಜಿ ಅವರು ಕೊಟ್ಟಿದ್ದಾರೆ. ಈ ತತ್ವಗಳನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಬದಲಾಗಿ ಉತ್ತಮ ಸಮಾಜ ನಮ್ಮದಾಗುತ್ತದೆ’ ಎಂದು ಸಲಹೆ ನೀಡಿದರು.
‘ಗಾಂಧಿ ಬದುಕನ್ನು ಅಪ್ಪಿಕೊಂಡವರು ಪ್ರಬುದ್ಧರಾಗಿದ್ದಾರೆ. ಸತ್ಯವನ್ನು ಜೀವನದಲ್ಲಿ ಪಾಲಿಸಿದವರೂ ಮೌಲ್ಯವನ್ನು ಕಾಣುತ್ತಾರೆ. ದೇಶದಲ್ಲಿ ರಚನಾತ್ಮಕ ಮತ್ತು ಆಡಳಿತಾತ್ಮಕವೆಂಬಂತೆ ಎರಡು ಭಾಗವಾಗಿ ವಿಂಗಡಣೆ ಮಾಡುತ್ತಾರೆ. ಆದರೆ ಇದು ಮರೆಯಾಗುತ್ತಿದೆ, ಏಕೆಂದರೆ ರಾಜಕೀಯ ಎನ್ನುವುದನ್ನು ಉದ್ಯಮವಾಗಿ ಬದಲಾವಣೆ ಮಾಡಿಕೊಂಡು ಸೇವೆ ಎನ್ನುವುದನ್ನು ಮರೆಯುತ್ತಿದ್ದಾರೆ. ಅಮೆರಿಕದ ರಾಜಕೀಯಕ್ಕೆ ಬಂದವರು ಮತ್ತೆ ಅಧಿಕಾರ ಮುಗಿದ ಮೇಲೆ ಮರಳಿ ಸ್ವಉದ್ಯೋಗಕ್ಕೆ ಮರಳುತ್ತಾರೆ. ಆ ರೀತಿ ನಮ್ಮ ದೇಶದಲ್ಲೂ ಮಾಡಿದರೆ ಭ್ರಷ್ಟಾಚಾರವೇ ಇರುವುದಿಲ್ಲ’ ಎಂದು ಪ್ರತಿಪಾದಿಸಿದರು.
ಹಿರಿಯ ಗಾಂಧಿವಾದಿ ಡಿ.ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರೊ.ಡಿ.ಎಸ್. ಪ್ರತಿಮಾ, ಸಹಪ್ರಾಧ್ಯಾಪಕಿ ಎಂ.ಕೆಂಪಮ್ಮ ಭಾಗವಹಿಸಿದ್ದರು.
‘ತತ್ವಭ್ರಷ್ಟ ರಾಜಕಾರಣಿಗಳ ಎದೆಗೆ ಗಾಂಧಿ ಬರಬೇಕಿದೆ’
‘ಸತ್ಯಶೋಧನೆ–100 ಮತ್ತು ವರ್ತಮಾನ’ ಕುರಿತು ವಿಷಯ ಮಂಡಿಸಿದ ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ‘ಪ್ಯಾಲೆಸ್ತೇನ್ ಉಕ್ರೇನ್ ಅಂತಹ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ಅಮಾಯಕರು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಈಗ ನೆನಪಾಗುತ್ತಿದೆ ಗಾಂಧೀಜಿ ಅವರು ಮತ್ತೆ ಬರಬೇಕೆನ್ನುತ್ತಿದ್ದಾರೆ. ತತ್ವಭ್ರಷ್ಟ ರಾಜಕಾರಣಿಗಳ ಎದೆಗೆ ಗಾಂಧಿ ಬರಬೇಕಿದೆ. ವ್ಯಾಟ್ಸಾಪ್ನಲ್ಲಿ ವಿಕೃತಿ ಮೆರೆಯಲಾಗುತ್ತಿದೆ. ವಿಷ ಬೀಜವನ್ನು ಇದರಲ್ಲಿ ಬಿತ್ತಲಾಗುತ್ತಿದೆ. ಇದರಿಂದ ಎಲ್ಲರೂ ಹೊರಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು. ಗಾಂಧೀಜಿ ಎಂಬುವ ವರ್ತಮಾನ ನಮ್ಮ ದೇಶಕ್ಕಷ್ಟೇ ಅಲ್ಲ ಜಗತ್ತಿಗೆ ಮೀಸಲಾಗಿದೆ. ಇವರ ಹೋರಾಟವು ಸಹ ಮಾದರಿ ಆಗಿದೆ. ಗಾಂಧೀಜಿ ಆಶಯಗಳನ್ನು ಮರೆತರೆ ನಾವು ಅವರ ಸಪ್ತ ಪಾತಕಗಳಿಗೆ ಒಳಗಾದಂತೆ ಆಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.