ಮಂಡ್ಯ: ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ ಸುಮಾರು 375 ಉತ್ಪನ್ನಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿರುವುದನ್ನು ಸ್ವಾಗತಿಸಿ, ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ನಗರದ ಪೇಟೆಬೀದಿಯಲ್ಲಿ ಸಂಭ್ರಮಾಚರಣೆ ನಡೆಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವರ್ತಕರು ಮತ್ತು ಸಾರ್ವಜನಿಕರಿಗೆ ಸಿಹಿ ತಿನ್ನಿಸಿ, ಸಂಭ್ರಮಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷೋದ್ಗಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.
ಆರ್. ಅಶೋಕ್ ಮಾತನಾಡಿ, ‘79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೀಪಾವಳಿಯ ಉಡುಗೊರೆ ನೀಡುವುದಾಗಿ ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಮಾಡಿ ನುಡಿದಂತೆ ನಡೆದಿದ್ದಾರೆ. ನಮ್ಮದು ಜನಪರ ಸರ್ಕಾರ’ ಎಂದು ಹೇಳಿದರು.
ಜಿಎಸ್ಟಿ ಇಳಿಕೆಯಿಂದಾಗಿ ಹಾಲಿನ ಉತ್ಪನ್ನಗಳು, ಕುರುಕಲು ತಿಂಡಿ, ಪಾತ್ರೆ, ಹೊಲಿಗೆ ಯಂತ್ರದಂಥ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಇಳಿಕೆಯಾಗಿದೆ. ಈ ಹಿಂದಿನ ಯುಪಿಎ ನೇತೃತ್ವದ ಮನ್ಮೋಹನ್ಸಿಂಗ್ ಸರ್ಕಾರ ಅಗತ್ಯ ವಸ್ತುಗಳ ಮೇಲೆ ಶೇ 30ರಷ್ಟು ತೆರಿಗೆ ವಿಧಿಸಿತ್ತು. ಎನ್ಡಿಎ ಸರ್ಕಾರದ ಅವಧಿಯಲ್ಲಿ ಶೇ 18ರಿಂದ ಶೇ 5ಕ್ಕೆ ಇಳಿಸಲಾಗಿದೆ ಹೇಳಿದರು.
ಮಂಗಳೂರು ಸೇರಿದಂತೆ ಮಲೆನಾಡಿನ ಭಾಗದಲ್ಲಿ ಕೋಮುಗಲಭೆಗಳು ಸೃಷ್ಟಿಯಾಗುತ್ತಿರುವುದು ಕಾಂಗ್ರೆಸ್ನಿಂದಲೇ. ಮದ್ದೂರಿನಲ್ಲಿ ಹಿಂದೂಗಳ ಮೇಲೆ ಆದ ಹಲ್ಲೆಯೇ ಇದಕ್ಕೆ ಉದಾಹರಣೆ. ಅವರು ಈದ್ ಮಿಲಾದ್ ವೇಳೆ ಗಣೇಶ ಪ್ರತಿಷ್ಠಾಪನೆ ಎದುರೇ ಡಿ.ಜೆ. ಹಾಕಿ ಕುಣಿದಿದ್ದರು. ಹಿಂದೂಗಳು ಸಹಿಷ್ಣುಗಳಾದ್ದರಿಂದ ಆಗ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಗಣಪತಿ ವಿಸರ್ಜನೆ ವೇಳೆ ಮುಸ್ಲಿಮರು ಹಲ್ಲೆ ಮಾಡುತ್ತಾರೆ. ಇದು ಕಾಂಗ್ರೆಸ್ ಉತ್ತೇಜಿತ ದಾಳಿ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ನಗರ ಅಧ್ಯಕ್ಷ ವಸಂತ್ ಕುಮಾರ್, ಮುಖಂಡರಾದ ಎಸ್.ಪಿ. ಸ್ವಾಮಿ, ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಅಶೋಕ್ ಜಯರಾಂ ಭಾಗವಹಿಸಿದ್ದರು.
ಮೊಸರಲ್ಲಿ ಕಲ್ಲು ಹುಡುಕುವ ಸಿಎಂ
ತೆರಿಗೆ ಇಳಿಕೆಯನ್ನು ದೇಶದ ಎಲ್ಲ ರಾಜ್ಯಗಳು ಸ್ವಾಗತಿಸಿವೆ. ಆದರೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊಸರಲ್ಲಿ ಕಲ್ಲು ಹುಡುಕುವಂತೆ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿದೆ. ತೆರಿಗೆ ಕಡಿತದಿಂದಾಗಿ ಅವರ ಕಮಿಷನ್ ದಂಧೆಗೆ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.