ಕಿಕ್ಕೇರಿ: ಸುಮಾರು 20 ವರ್ಷಗಳಿಂದ ಹೋಬಳಿಯ ಊಗಿನಹಳ್ಳಿಯಲ್ಲಿದ್ದ ಎಎನ್ಎಂ ಆರೋಗ್ಯ ಕೇಂದ್ರ ಪಾಳುಬಿದ್ದು ಪರದಾಡುತ್ತಿದ್ದ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಮರುನಿರ್ಮಾಣಕ್ಕೆ ಗುರುವಾರ ಚಾಲನೆ ಸಿಕ್ಕಿದೆ. ಇದರಿಂದ ಗ್ರಾಮಸ್ಥರು ಸಂಭ್ರಮಪಟ್ಟಿದ್ದಾರೆ.
ಆರೋಗ್ಯ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದ ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಜಿ.ಎಸ್.ರಘು ಮಾತನಾಡಿ, ಆರೋಗ್ಯ ಕೇಂದ್ರದ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು, ₹ 60 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ತಡೆಯೊಡ್ಡಿ ಅನುದಾನ ವಾಪಸ್ ಹೋ ಗುವಂತೆ ಮಾಡಬಾರದು ಎಂದರು.
ಆರಂಭದಲ್ಲಿ ಹಲವು ಮುಖಂಡರು ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಅಡ್ಡಿಪಡಿಸಿದರು.
ಭೂಮಿಪೂಜೆಗೆ ಅಡ್ಡಿಪಡಿಸಿ ಸ್ಥಳದಲ್ಲಿ ಕುಳಿತು ಕಾಮಗಾರಿ ಆರಂಭವಾಗಲು ತಡೆಯೊಡಿದ್ದರು. ಬಳಿಕ ಅವರ ಮನವೊಲಿಸಲಾಯಿತು. ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿರುವುದು ಖುಷಿ ನೀಡಿದೆ ಎಂದು ವಯೋವೃದ್ಧೆ ಪುಟ್ಟಮ್ಮ ಸಂತಸ ವ್ಯಕ್ತಪಡಿಸಿದರು.
ಕಿಕ್ಕೇರಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.
ಗ್ರಾಪಂ ಸದಸ್ಯ ರಾಜಶೇಖರ ಮೂರ್ತಿ, ಮಾಜಿ ಅಧ್ಯಕ್ಷ ಮುರಳೀಧರ್, ಮಾಜಿ ಉಪಾಧ್ಯಕ್ಷರಾದ ಹೇಮಲತಾ ಪರಮೇಶ್, ರೂಪೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಮಧುಸೂಧನ್, ಡಾ.ರಜಿನಿ, ಲಕ್ಷ್ಮೀಪುರ ಪಿಡಿಒ ಸುರೇಶ್ ಬಾಬು, ಜಿಪಂ ಎಇಇ ಜನಾರ್ದನ್, ಗುತ್ತಿಗೆದಾರ ರಮೇಶ್ಗೌಡ, ಮುಖಂಡರಾದ ತಿಮ್ಮಶೆಟ್ಟಿ, ಕೊಪ್ಪಲು ಬಸವರಾಜು, ಮಾದಪ್ಪ, ಸೋಮಸುಂದರ್, ಸಣ್ಣಸ್ವಾಮಣ್ಣ, ಪುಟ್ಟಸ್ವಾಮಣ್ಣ, ಆಶಾ ಕಾಯಕರ್ತೆ ರೇಣುಕಾ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.