ಕೆ.ಆರ್.ಪೇಟೆ: ಪಶ್ಚಿಮಘಟ್ಟದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಗೊರೂರು ಬಳಿಯ ಹೇಮಾವತಿ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದ್ದು, ನದಿಗೆ ನೀರು ಹರಿದುಬಿಟ್ಟಿರುವುದರಿಂದ ತಾಲ್ಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಗೊರೂರು ಜಲಾಶಯದಿಂದ 17 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಯ ಬಿಡಲಾಗಿರುವುದರಿಂದ ಹೇಮಾವತಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು ನದಿಪಾತ್ರದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು ನದಿಪಾತ್ರದ ಹಳ್ಳಿಗಳ ಜನ ತುಂಬಿ ಹರಿದುಬರುತ್ತಿರುವ ಹೇಮಾವತಿ ನದಿಗೆ ಬಾಗಿನ ನೀಡಿ ಸ್ವಾಗತಿಸಿದ್ದಾರೆ.
ತಾಲ್ಲೂಕಿನ ಕಡೆಹೆಮ್ಮಿಗೆ- ಗೂಡೆಹೊಸೂರು ಬಳಿ ತಾಲ್ಲೂಕನ್ನು ಪ್ರವೇಶಿಸುವ ಹೇಮಾವತಿ ನದಿ ಹಲವು ಗ್ರಾಮಗಳನ್ನು ಹಾದು ಹೋಗುತಿದ್ದು ಹಲವು ಪುಣ್ಯತಾಣಗಳ ಸೃಷ್ಟಿಗೆ ಕಾರಣವಾಗಿದೆ. ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಪೋ ಭೂಮಿಯಾಗಿರುವ ಹೇಮಗಿರಿ ಬಳಿ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವುದರ ಜತೆಗೆ ಬೆಟ್ಟದ ಮೇಲಿನ ಕಲ್ಯಾಣ ವೆಂಕಟರಮಣನಿಗೆ ನಮಿಸಿ ಸಾಗುತ್ತದೆ. ಕಡೆಹೆಮ್ಮಿಗೆ, ಮಾದಾಪುರ, ಮಂದಗೆರೆ, ಹೇಮಗಿರಿ, ಅಕ್ಕಿಹೆಬ್ಬಾಳು, ಹರಿಹರಪುರ, ಮಡುವಿನಕೋಡಿ, ಬಂಡಿಹೊಳೆ ಕಟ್ಟಹಳ್ಳಿ, ಭೂವರಾಹನಾಥ ಕಲ್ಲಹಳ್ಳಿ, ಬೆಳ್ತೂರು ಮಾರ್ಗವಾಗಿ ನದಿಯು ಅಂಬಿಗರಹಳ್ಳಿ ಸಂಗಾಪುರದ ತ್ರಿವೇಣಿಸಂಗಮದ ಬಳಿ ಕಾವೇರಿ ನದಿಯನ್ನು ಸಂಗಮಿಸಿ ನಂತರ ಕನ್ನಂಬಾಡಿಕಟ್ಟೆ ಸೇರುತ್ತದೆ. ಹೇಮಗಿರಿ ಬಳಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿದ್ದ ಹೇಮಾವತಿ ನದಿಯ ಅಣೆ ಮೇಲೆ ನದಿಯ ನೀರು ರಭಸವಾಗಿ ಹರಿಯುತ್ತಿರುವುದರಿಂದ ಹೇಮಗಿರಿ ಫಾಲ್ಸ್ ನಿರ್ಮಾಣವಾಗಿದೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹೇಮಗಿರಿ ಫಾಲ್ಸ್ ನ್ನು ಕಣ್ತುಂಬಿಸಿಕೊಂಡು ಫಾಲ್ಸ್ ಬಳಿ ಪೋಟೊ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ.
ನದಿಗೆ ಇಳಿಯದಂತೆ ಮನವಿ
ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ನದಿಪಾತ್ರದ ಹಳ್ಳಿಗಳ ಜನರು ನದಿಗೆ ಇಳಿಯದಂತೆ ದನಕರುಗಳನ್ನು ಮೇಯಲು ಬಿಡದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೇಮಗಿರಿ ಅಣೆಯ ಬಳಿ ಹೋಗದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನದಿಪಾತ್ರದೊಳಗೆ ಇಳಿಯುವುದು ಫಾಲ್ಸ್ ಬಳಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಹೋಗುವುದು ನಡೆದಿದ್ದು ಸೂಕ್ತ ಭದ್ರತಾ ಕ್ರಮ ವಹಿಸಬೇಕೆಂದು ಮತ್ತು ಅಣೆಕಟ್ಟೆ ವ್ಯಾಪ್ತಿಯ ಫಾಲ್ಸ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಮುಳ್ಳಿನ ಗಿಡಗಳು ಗಿಡಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿ ಪ್ರವಾಸಿಗರು ಹೇಮಗಿರಿ ಫಾಲ್ಸ್ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ನೀರಾವರಿ ಇಲಾಖೆ ಹಾಗು ತಾಲ್ಲೂಕು ಆಡಳಿತ ಅವಕಾಶ ಮಾಡಿಕೊಡಬೇಕೆಂದು ಪುರಸಭೆಯ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.