ADVERTISEMENT

ಮಾನವ ಹಕ್ಕು ಉಲ್ಲಂಘನೆಯಾದರೆ ಪ್ರತಿಭಟಿಸಿ

ಮಾನವ ಹಕ್ಕುಗಳ ದಿನಾಚರಣೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:57 IST
Last Updated 11 ಡಿಸೆಂಬರ್ 2025, 2:57 IST
ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಮಂಡ್ಯ ನಗರದ ಕಲ್ಲು ಕಟ್ಟಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳ ದಿನಾಚರಣೆ 2025’ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು 
ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಮಂಡ್ಯ ನಗರದ ಕಲ್ಲು ಕಟ್ಟಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾನವ ಹಕ್ಕುಗಳ ದಿನಾಚರಣೆ 2025’ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು    

ಮಂಡ್ಯ: ‘ಭಾರತೀಯ ಸಂವಿಧಾನ ಭಾರತದ ಪ್ರಜೆಗಳಿಗೆ ತನ್ನದೇ ಆದ ಸ್ಥಾನಮಾನ ಹಾಗೂ ಹಕ್ಕುಗಳನ್ನು ನೀಡಿದೆ. ಪ್ರಮುಖವಾದ ಹಕ್ಕುಗಳಲ್ಲಿ ಒಂದಾದ ಮಾನವ ಹಕ್ಕುಗಳನ್ನು ನಾವೇ ರಕ್ಷಣೆ ಮಾಡಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ. ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಕಲ್ಲು ಕಟ್ಟಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಾನವ ಹಕ್ಕುಗಳ ದಿನಾಚರಣೆ 2025’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲೆಂದು ರಾಜ್ಯದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯೋಗ ಕಾರ್ಯ ನಿರ್ವಹಿಸುತ್ತಿದೆ. ಮಾನವ ಹಕ್ಕುಗಳು ಉಲ್ಲಂಘನೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು. 

ADVERTISEMENT

‘ಮಾನವ ಹಕ್ಕುಗಳು ಎಂದರೆ ಜನಾಂಗ, ಲಿಂಗ, ರಾಷ್ಟ್ರೀಯತೆ, ಭಾಷೆ, ಧರ್ಮ, ಅಥವಾ ಯಾವುದೇ ಇತರ ಸ್ಥಾನಮಾನವನ್ನು ಲೆಕ್ಕಿಸದೆ ಪ್ರತಿಯೊಬ್ಬ ಮನುಷ್ಯನಿಗೂ ಸಹಜವಾಗಿ ದೊರಕುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯ. ಇವುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಶಿಕ್ಷಣ, ಆರೋಗ್ಯ, ಕೆಲಸದ ಹಕ್ಕು ಮತ್ತು ತಾರತಮ್ಯದಿಂದ ಮುಕ್ತವಾಗಿ ಬದುಕುವ ಹಕ್ಕುಗಳು ಸೇರಿವೆ. ಇವು ವ್ಯಕ್ತಿಗಳ ಘನತೆ ಮತ್ತು ಸಾಮರ್ಥ್ಯವನ್ನು ಗುರುತಿಸುತ್ತವೆ ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಹಾಯ ಮಾಡುತ್ತವೆ’ ಎಂದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಡಿಡಿಪಿಯು ಸಿ. ಚೆಲುವಯ್ಯ, ಡಿಡಿಪಿಐ ಲೋಕೇಶ್ ಮಾತನಾಡಿದರು. ಉಪನ್ಯಾಸಕ ಚಂದ್ರಲಿಂಗು ಅವರು ‘ಮಾನವ ಹಕ್ಕುಗಳ ನಿಯಮ ಉಲ್ಲಂಘನೆ ಮಾಡದಂತೆ’ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ಪ್ರಾಂಶುಪಾಲ ಎಚ್.ಪಿ. ತಮ್ಮೇಗೌಡ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಡಿ.ಎಫ್.‌ಒ ರಘು ಡಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಆಶಾ, ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಹಾಜರಿದ್ದರು. 

ರಿಟ್‌ ಅರ್ಜಿ ಸಲ್ಲಿಸಿ

  ‘ಪಿ.ಇ.ಎಸ್ ಕಾನೂನು ಕಾಲೇಜಿನ ಕಾನೂನು ಸಹ ಪ್ರಾಧ್ಯಾಪಕ ಕೆ.ಎಸ್. ಜಯಕುಮಾರ್ ಮಾತನಾಡಿ ‘ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಸಂವಿಧಾನದ ಅನುಚ್ಛೇದ 32 ಸಾಂವಿಧಾನಿಕ ಪರಿಹಾರಗಳ ಹಕ್ಕಿನ ಪ್ರಕಾರ ರಿಟ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜಿಲ್ಲಾ ಮಟ್ಟದ ನ್ಯಾಯಾಧೀಶರು ರಾಜ್ಯಮಟ್ಟದ ಮಾನವ ಹಕ್ಕುಗಳ ಆಯೋಗ ಹಾಗೂ ರಾಷ್ಟ್ರಮಟ್ಟದ ಮಾನವ ಹಕ್ಕುಗಳ ಆಯೋಗದ ಮೂಲಕ ದೂರು ದಾಖಲಿಸಬಹುದಾಗಿದೆ’ ಎಂದು ಆನಂದ್ ಎಂ. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.