
ಕೆ.ಆರ್.ಪೇಟೆ: ‘ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಹೊಸ ತಲೆಮಾರಿನ ಬರಹಗಾರರು ಅಧ್ಯಯನ ಮಾಡಬೇಕು’ ಸಾಹಿತಿ ಶಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಆಚಾರ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕಿ ಜಯಮ್ಮ ಶಿವಸ್ವಾಮಿ ರಚಿತ ‘ಭಾವಸೌರಭ’ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಸೃಷ್ಟಿ ಎಂಬುದು ನಿರಂತರವಾದುದು. ಒಂದೊಂದು ಕಾಲಘಟ್ಟದಲ್ಲಿ ವಿಭಿನ್ನ ಬಗೆಯ ಸಾಹಿತ್ಯ ಕನ್ನಡದಲ್ಲಿ ಬಂದಿದೆ. ಲೇಖಕರಾದವರಿಗೆ ಇದರ ಅರಿವಿರಬೇಕು. ಶ್ರೀಮಂತ ಸಾಹಿತ್ಯ ಕನ್ನಡ ಭಾಷೆಗಿದ್ದು, ಪೂರ್ವಸೂರಿಗಳ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ನಾವು ಬರೆಯುವ ಸಾಹಿತ್ಯ ಉತ್ತಮವಾಗಿರಲು ಸಾಧ್ಯವಾಗುತ್ತದೆ’ ಎಂದರು.
‘ಈ ಕವನ ಸಂಕಲನದ ಕವಿತೆಗಳು ಅರ್ಥಪೂರ್ಣವಾಗಿದ್ದು, ಸರಳವಾಗಿದೆ’ ಎಂದರು
ಸಮಾರಂಭ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಮಾತನಾಡಿ, ‘ಕವಿತ್ವ ಎಂಬುದು ಹೃದಯಾಂತರಾಳದಿಂದ ಮೂಡಿಬರಬೇಕು. ಸಾಹಿತ್ಯ ಓದುವದು, ಅಧ್ಯಯನ ನಡೆಸುವದರಿಂದ ಬರವಣಿಗೆಗೆ ಸ್ಫೂರ್ತಿ ದೊರೆಯುತ್ತದೆ. ಇದರಿಂದ ಉತ್ತಮ ಸಾಹಿತಿ ಆಗಬಹುದು’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಭಾವಸೌರಭ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಚಾರ್ಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಕೆ.ಎಸ್. ನಾಗೇಶ್ ಬಾಬು ವಹಿಸಿದ್ದರು.
ಕೃತಿಯ ಲೇಖಕಿ ಜಯಲಕ್ಷ್ಮಿ, ಶಿವಸ್ವಾಮಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಕೆ.ಎಸ್.ಸೋಮಶೇಖರ್, ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ಸಾಹಿತಿ ಬಲ್ಲೇನಹಳ್ಳಿ ಮಂಜು ನಾಥ್, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ್, ಡಿ.ನಾರಾಯಣ ಸ್ವಾಮಿ, ಶ್ರೀಕಾಂತ್ ಚಿಮ್ಮ್ಮಲ್, ಖಲೀಲ್, ಶಿವಸ್ವಾಮಿ ಇದ್ದರು.
ಕೃತಿ ಪರಿಚಯ ಕೃತಿ: ಭಾವಸೌರಭ ಲೇಖಕ: ಡಿ.ಜಯಲಕ್ಷ್ಮಿ ಶಿವಸ್ವಾಮಿ ಪ್ರಕಾಶನ: ಅಕ್ಷಯ ದರ: 80
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.