
ಮಂಡ್ಯ: ‘ಇಡೀ ಜಗತ್ತಿಗೆ ಸಾಫ್ಟ್ವೇರ್ ರಫ್ತು ಮಾಡುವುದು ನಮ್ಮ ಕರ್ನಾಟಕ. ಮಂಡ್ಯದಿಂದ 90 ರಾಷ್ಟ್ರಗಳಿಗೆ ಎಥೆನಾಲ್ ಪೂರೈಕೆ ಮಾಡಿದ ಹೆಗ್ಗಳಿಕೆ ನಮ್ಮದು. ಲಂಡನ್ ಉದ್ಯಮಿಗಳು ಕರ್ನಾಟಕಕ್ಕೆ ಬಂದು ಹಣ ಹೂಡಿಕೆ ಮಾಡಬಹುದು. ನಮ್ಮ ಸರ್ಕಾರ ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ’ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ಲಂಡನ್ನ ಹೌಸ್ ಆಫ್ ಕಾಮನ್ಸ್ (ಪಾರ್ಲಿಮೆಂಟ್)ನಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಅವರು ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು.
ಇಂಗ್ಲೆಂಡ್ ರಾಣಿ ಎಲಿಜಬೆತ್ ಬಳಿ ಇದ್ದ ಕೊಹಿನೂರು ವಜ್ರ ಕೂಡ ಕರ್ನಾಟಕದ್ದು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ದುಬೈ ಸೇರಿ ವಿದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಅಷ್ಟಾಗಿ ಇಲ್ಲ ಎಂದರು.
ಇಂಗ್ಲೆಂಡ್ನ ಪಾರ್ಲಿಮೆಂಟ್ನಲ್ಲಿ ಕನ್ನಡ ಪ್ರತಿನಿಧಿಯಾಗಿ ಪಾಲ್ಗೊಂಡಿರುವುದು ನನಗೆ ಖುಷಿಯ ವಿಚಾರ. ಭಾರತ ಮೂಲದ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಲೂಮಿನಾರ್ಸ್ ಸಂಸ್ಥೆ ಸಹಯೋಗದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 25ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಯಿತು.
ಅತಿಥಿಗಳಾಗಿ ಲಂಡನ್ನಲ್ಲಿ ನಾಲ್ಕು ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವ ವೀರೇಂದ್ರ ಶರ್ಮಾ ಪಾಲ್ಗೊಂಡಿದ್ದರು. ವಿದೇಶಿ ಸಾಧಕರ ಜತೆಗೆ ಬೆಂಗಳೂರು ಕಿಂಗ್ಸ್ ಕ್ಲಬ್ನ ಮಾಲೀಕ ವಿ.ರವಿಕುಮಾರ್ ಹಾಗೂ ದುಬೈನಲ್ಲಿರುವ ಎಂ.ಕೆ. ಇಂಟರ್ ನ್ಯಾಷನಲ್ ಕಂಪನಿಯ ಮಾಲೀಕ ಕಾರ್ತಿಕ್ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.