ಮಳವಳ್ಳಿ: ಅಭಿವೃದ್ಧಿ ಪರ ಚಿಂತನೆ ನಡೆಸುತ್ತಿದ್ದ ನಾಡಪ್ರಭು ಕೆಂಪೇಗೌಡ ಹಾಗೂ ಕುಟುಂಬ ಈ ನಾಡಿಗೆ ಅಪಾರ ಸೇವೆ ನೀಡಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಣ್ಣಿಸಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂಪೇಗೌಡರ ಪರಿಕಲ್ಪನೆಯಂತೆ ಪಟ್ಟಣದಲ್ಲಿಯೇ ಒಂದೇ ಸಂಕೀರ್ಣದಲ್ಲಿ ತಾಲ್ಲೂಕು ಮಟ್ಟದ ಕಚೇರಿಗಳ ನಿರ್ಮಾಣ, ಸರ್ಕಾರಿ ಎಂಜಿರಿಯಂಗ್ ಕಾಲೇಜು, ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಪದವಿವರೆಗಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಮಾತನಾಡಿ, ಕೆಂಪೇಗೌಡರ ಅಭಿವೃದ್ಧಿ ದೂರದೃಷ್ಟಿಯಿಂದ ಎಲ್ಲ ಜಾತಿ, ಧರ್ಮ, ವರ್ಗಗಳಿಗೆ ವಾಸಿಸಲು ಹಾಗೂ ಅವರ ಕುಲ ಕಸುಬುಗಳ ಮೂಲಕ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಟ್ಟದ್ದು ಮಾದರಿ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ಮಾತನಾಡಿ, ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರಿಡುವುದು ಮುಂತಾದ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಮುಂಭಾಗದಿಂದ ಕೆಂಪೇಗೌಡ ಅವರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿ ಇರಿಸಿ, ಕಲಾ ತಂಡಗಳೊಂದಿಗೆ ಮರೆವಣಿಗೆ ನಡೆಸಲಾಯಿತು.
ತಹಶೀಲ್ದಾರ್ ಕೆ.ಎನ್.ಲೋಕೇಶ್, ತಾ.ಪಂ.ಇಒ ರಾಮಲಿಂಗಯ್ಯ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್.ಪಿ.ಸುಂದರ್ ರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ದ್ಯಾಪೇಗೌಡ, ಜಿ.ಪಂ.ಮಾಜಿ ಸದಸ್ಯರಾದ ಆರ್.ಎನ್.ವಿಶ್ವಾಸ್, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಮುಖಂಡರಾದ ದೊಡ್ಡಯ್ಯ, ಸಿ.ಮಾಧು, ಚಿಕ್ಕರಾಜು, ಪುಟ್ಟಸ್ವಾಮಿ, ಸುಂದರೇಶ್, ನಾಗೇಶ್, ಸವಿತಾ, ಎಂ.ಬಿ.ಮಲ್ಲಯ್ಯ, ಬಂಕ್ ಮಹದೇವು, ಪ್ರಮೀಳಾ, ಶಿವಮಾದೇಗೌಡ, ರೋಹಿತ್ ಇದ್ದರು.
‘ಜಾನಪದ ತರಬೇತಿ ಕೇಂದ್ರ’
ಜನಪದ ಕಲಾವಿದ ಮಳವಳ್ಳಿ ಡಾ.ಮಹದೇವಸ್ವಾಮಿ ಮಾತನಾಡಿ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇದೆ. ಹೀಗಾಗಿ ಶಾಸಕರು ತಾಲ್ಲೂಕಿನಲ್ಲಿ ಎಲ್ಲಿಯಾದರೂ ಜಾಗ ನೀಡಿದರೆ ಜಾನಪದ ತರಬೇತಿ ಕೇಂದ್ರ ಪ್ರಾರಂಭಿಸಿ ನಶಿಸುತ್ತಿರುವ ಗ್ರಾಮೀಣ ಕಲೆಯನ್ನು ಇಂದಿನ ಯುವಪೀಳಿಗೆ ಧಾರೆ ಎರೆಯಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.