ಕಿಕ್ಕೇರಿ: ಇಲ್ಲಿನ ಕಿಕ್ಕೇರಮ್ಮನವರ ಜಾತ್ರೆ ಸಹಸ್ರಾರು ಭಕ್ತರ ಸಂಭ್ರಮದೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಸಂಜೆ 5.15ಕ್ಕೆ ಹಾಲುಮತಸ್ಥ ಸಮುದಾಯದವರು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವ ಶುರುವಾಯಿತು. ಕಿಕ್ಕೇರಮ್ಮನ ಪರವಾದ ಘೋಷಣೆಗಳು ಮೆರುಗು ನೀಡಿದವು.
ನೂತನ ರಥ ಪೂಜೆ, ಬಲಿ, ಧ್ವಜಪಟ ಪೂಜೆ, ಕಳಸ ಪೂಜಾ ವಿಧಾನಗಳು ನಡೆದವು. ಗ್ರಾಮವನ್ನು ತಳಿರು ತೋರಣ, ರಂಗೋಲಿ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು.
ಉತ್ಸವ ಮೂರ್ತಿ ಹೊಸಬೀದಿ, ರಥಬೀದಿ, ಕೆ.ಎಸ್.ನರಸಿಂಹಸ್ವಾಮಿ ಬೀದಿ, ಸುಬ್ಬರಾಯರ ಛತ್ರದ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಸಾಗಿತು. ಭಕ್ತರು ದೇವಿಗೆ ಹಣ್ಣು, ಕಾಯಿ ಅರ್ಪಿಸಿ, ಆರತಿ ಬೆಳಗಿದರು. ನಂತರ ದೇವಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮಹಾಪೂಜೆ ಸಲ್ಲಿಸಲಾಯಿತು.
ಸುತ್ತಮುತ್ತಲ ಹಳ್ಳಿಗಳಲ್ಲದೆ, ಜಿಲ್ಲೆ, ರಾಜ್ಯ, ಮುಂಬೈನಿಂದಲೂ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದು ಹಣ್ಣು, ದವನ ಎಸೆದರು.
ರಥೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ನೀರು ಮಜ್ಜಿಗೆ, ಪಾನಕ, ಪುಳಿಯೋಗರೆ, ಮೊಸರನ್ನ ನೀಡಿದರು. ಸಚಿವ ಕೆ.ಸಿ.ನಾರಾಯಣಗೌಡ, ಲಕ್ಷ್ಮೀಪುರ ಗ್ರಾಮದ ದೇವಿಯ ಒಕ್ಕಲಿನ ಬೂನಾಸಿ, ಕೆಂಚಮ್ಮ, ದೊಡ್ಡಹಟ್ಟಿ, ಮಾರಮ್ಮ ವಠಾರದ ಮುಖಂಡರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.