
ಆಸ್ಟ್ರೇಲಿಯಾದ ಪರ್ಥ್ನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವೆಸ್ಟರ್ನ್ ಕನ್ನಡ ಸಂಘದವರು ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ‘ವಿಶ್ವ ಕನ್ನಡ ಕಣ್ಮಣಿ’ ಪ್ರಶಸ್ತಿ ನೀಡಿ ಗೌರವಿಸಿದರು
ಕಿಕ್ಕೇರಿ: ‘ಕಿಕ್ಕೇರಿಯ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಗಳನ್ನು ವಿದೇಶದಲ್ಲಿಯೂ ಪ್ರತಿಯೊಬ್ಬರ ಬಾಯಿಯಲ್ಲಿ ಗುನುಗುವಂತೆ ಮಾಡಿ ವಿಶ್ವವ್ಯಾಪಿಗೊಳಿಸಲು ನನ್ನ ಉಸಿರು ಇರುವವರಿಗೆ ಮಾಡುತ್ತೇನೆ’ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಆಸ್ಟ್ರೇಲಿಯಾದ ಪರ್ಥ್ನಲ್ಲಿ ವೆಸ್ಟರ್ನ್ ಕನ್ನಡ ಸಂಘದವರು ಶನಿವಾರ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ನೀಡಿದ ‘ವಿಶ್ವ ಕನ್ನಡ ಕಣ್ಮಣಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಕವಿ, ಸಾಹಿತಿಗಳು ಜನಿಸಿದ ಗ್ರಾಮ ನಮ್ಮದಾದರೂ, ಸವಲತ್ತು ಸೌಲಭ್ಯಗಳಿಲ್ಲದ ಕುಗ್ರಾಮವಾಗಿದೆ. ಸಂಗೀತದ ಮನಸ್ಸು ಬೆಂಗಳೂರು ಸೇರಿಸಿತು. 25ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದರೂ ತವರಿನ ಪ್ರೀತಿ ಮರೆಯಲಾಗದು’ ಎಂದರು.
‘ಇಲ್ಲಿನ ಶಾಲಾ ಮಕ್ಕಳಿಗೆ ಉಚಿತವಾಗಿ ಕನ್ನಡ ಪಠ್ಯ ಪುಸ್ತಕ, ಸುಗಮ ಸಂಗೀತ ತರಬೇತಿ ನೀಡಿದ್ದು, ಮುಂದಿನ ರಾಜ್ಯೋತ್ಸವ ಸಮಾರಂಭದಲ್ಲಿ 200ಜನರಿಂದ ಕನ್ನಡವೇ ಸತ್ಯ ಮತ್ತಿತರ ಗೀತೆ ಹಾಡಿಸಲಾಗುವುದು’ ಎಂದು ಹೇಳಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಲಿಖಿತ್ ಕೃಷ್ಣ ಅವರು ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ‘ಕೋಡಗನ ಕೋಳಿ ನುಂಗಿತ್ತಾ’, ‘ಹೇಳಿದ್ದು ಸುಳ್ಳಾಗಬಹುದು’, ‘ಮಲೆನಾಡಿನ್ ಮೂಲೆನಾಗೆ ಇತ್ತೊಂದು ಸೋಮನಳ್ಳಿ’, ‘ಕನ್ನಡ ರೋಮಾಂಚನವೀ ಕನ್ನಡ’ ಗೀತೆಗಳ ಕೆಎಸ್ನ ಗೀತೆಗಳನ್ನು ಆಸ್ಟ್ರೇಲಿಯಾ ಕನ್ನಡಿಗರೊಂದಿಗೆ ಹಾಡಿಸಿ ಕನ್ನಡದ ಕಂಪಿನ ಕಹಳೆ ಮೊಳಗಿಸಿದರು.
ಸಂಘದ ಶಂಕರ ಅಳೆಪಡಿ, ದೇವರಾಜ್ ಗೌಡ, ಗುರು ಗುಪ್ತಾ, ಅನಲೆ ಶ್ರೀರಾಮ್, ಪ್ರಸನ್ನಗೌಡ, ನಟರಾಜ ಕಳಲೆ, ಶಶಿಕಿರಣ ರಾಮಾಂಜನೇಯ, ಸುರೇಶ, ಸಿದ್ದಗಂಗಯ್ಯ, ಸ್ಮಿತಾ ಮಹೇಶ್, ಸಂದೀಪ್, ಶಿವರುದ್ರಯ್ಯ, ವೀಣಾ ಈಶ್ವರಯ್ಯ, ಎಸ್. ಚಂದ್ರು, ಚಿಕ್ಕಮಗಳೂರು ಪ್ರಸನ್ನಗೌಡ, ಶಂಕರ್, ಕೆ. ಗೋವಿಂದ್, ಕವಿ ಮಮತಾ ಅರಸೀಕೆರೆ, ಹರ್ಷ ಸಾಲಿಮಠ್, ಪದ್ಮಾಮುಕುಂದರಾಜ್ ಭಾಗವಹಿಸಿದ್ದರು.