
ಕಿಕ್ಕೇರಿ: ಧರ್ಮ, ಸಂಸ್ಕೃತಿ ಪ್ರತೀಕವಾದ ದೇಗುಲಗಳು ಗ್ರಾಮದ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಆರ್ಟಿಒ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.
ಹೋಬಳಿಯ ಶಟ್ಟಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ನೂತನ ಹುರುಚಲಮ್ಮ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ದೇಗುಲ ಅಭಿವೃದ್ಧಿಗಾಗಿ ₹50 ಸಾವಿರ ದೇಣಿಗೆ ನೀಡಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಸಕರಾತ್ಮಕ ಶಕ್ತಿ ವೃದ್ಧಿಸಿ, ಶಾಂತಿ, ನೆಮ್ಮದಿ ಲಭಿಸಲು ದೇಗುಲಗಳ ಶಕ್ತಿ ಕಾರಣವಿದೆ. ಅಧ್ಯಾತ್ಮ, ಧಾರ್ಮಿಕ ಭಾವನೆಯಿಂದ ತಾಮಸಗುಣ ನಿಗ್ರಹಿಸಲಿದೆ. ದಿನದ ಒಂದಿಷ್ಟು ವೇಳೆ ಭಗವಂತನ ಆರಾಧನೆಯಿಂದ ಗ್ರಾಮ, ಕುಟುಂಬಗಳಿಗೆ ಒಳಿತಾಗಲಿದೆ ಎಂದರು.
ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲಗಳು ಲೋಕಕಲ್ಯಾಣಕ್ಕೆ ಶಕ್ತಿಪೀಠವಾಗಿವೆ. ಗ್ರಾಮಗಳಲ್ಲಿ ಒಗ್ಗಟ್ಟು, ಏಕತೆ ಮೂಡಲು ದೇಗುಲಗಳಂತಹ ಶ್ರದ್ಧಾಕೇಂದ್ರ ಅವಶ್ಯವಿದೆ. ನಮ್ಮ ಬದುಕು ನಡೆ ನುಡಿಯನ್ನು ತಿದ್ದಿ ತೀಡಲು ಸಂಸ್ಕಾರ ಕಲಿಸಲು ಭಗವಂತನ ಆರಾಧನೆ ಕಾರಣವಾಗಿದೆ ಎಂದು ತಿಳಿಸಿದರು.
ಹೇಮಾವತಿ ನದಿಯಿಂದ ದೇವಿಗೆ ಗಂಗೆಯನ್ನು ತರಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ, ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ದೇವಿಗೆ 108 ಕಳಸಗಳ ಗಂಗಾಜಲಾಭಿಷೇಕ ನೆರವೇರಿಸಲಾಯಿತು.
ಕಲಸೋತ್ಸವ, ರಾಕ್ಷೆಘ್ನ, ವಿವಿಧ ಹೋಮ ಹವನ, ಪ್ರಾಣ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಹಾನಿವೇದನೆ, ಅಷ್ಟಾವಧಾನ ಸೇವೆ ಮತ್ತಿತರ ಪೂಜಾ ಕೈಂಕರ್ಯಗಳು ನಡೆದವು.
ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಬೆಡದಹಳ್ಳಿ ಪಂಚಭೂತೇಶ್ವರ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ, ಶಾಸಕ ಎಚ್.ಟಿ. ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ, ಸಮಾಜ ಸೇವಕ ಮೊಟ್ಟೆ ಮಂಜು, ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್, ರಘು, ಅಶೋಕ್, ಸುಂದರ್, ಗ್ರಾಮ ಮುಖಂಡರು, ಸುತ್ತಮುತ್ತಲ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.