ಕೆ.ಆರ್.ಪೇಟೆ: ಮನ್ಮುಲ್ ಸೌಲಭ್ಯಗಳನ್ನು ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿ ಇರುವ ಕೆಲವು ಸಂಘಗಳಿಗೆ ನೀಡದಿರುವ ಬಗ್ಗೆ ದೂರುಗಳು ಬಂದಿದ್ದು, ಸದನದಲ್ಲಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ತಾಲ್ಲೂಕಿನ ಅರಳಕುಪ್ಪೆ ಮತ್ತು ಬಿ.ನಾಟನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಸಕರ ಹೆಸರನ್ನು ಸಂಘದ ಆಹ್ವಾನ ಪತ್ರಿಕೆಯಲ್ಲಿ ಹಾಕಿಸಬಾರದು. ತಪ್ಪಿದರೆ ವಾರ್ಷಿಕ ಮಹಾಸಭೆಗೆ ಬರುವುದಿಲ್ಲ ಎಂದು ಸ್ಥಳೀಯ ಮನ್ಮುಲ್ ನಿರ್ದೇಶಕರು ಕಾರ್ಯದರ್ಶಿಗೆ ಧಮಕಿ ಹಾಕುತ್ತಿದ್ದಾರೆಂಬ ಆರೋಪ ಇದೆ. ಹೀಗಾದರೆ ಸಹಕಾರ ಸಂಘಗಳ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ‘ಸಹಕಾರ ಸಂಘಳಲ್ಲಿ ರಾಜಕೀಯ ಮಾಡುವುದು ಒಳ್ಳೆಯ ಲಕ್ಷಣ ಅಲ್ಲ. ಸಹಕಾರ ಸಂಘಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಅವರು ಹೇಳಿದರು.
ಅರಳಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಪಿ.ಉಮೇಶ್, ಬಿ.ನಾಟನಹಳ್ಳಿ ಸಂಘದ ಅಧ್ಯಕ್ಷ ಎನ್.ಎಸ್.ಮಹೇಶ್ , ಉಪಾಧ್ಯಕ್ಷ ರಾದ ಜಲೇಂದ್ರ, ಶಶಿಕಲಾ, ಶಾಸಕರ ಆಪ್ತ ಸಹಾಯಕ ಅರಳುಕುಪ್ಪೆ ಪ್ರತಾಪ್ , ಎರಡೂ ಸಂಘಗಳ ನಿರ್ದೇಶಕರು ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ, ಷೇರುದಾರರು , ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.