
ಕೆ.ಆರ್. ಪೇಟೆ: ಮಳೆಗಾಲ ಬಂತೆಂದರೆ ಕೆರೆಯಾಗುವ ಮೂಲಕ ಸದಾ ಸುದ್ದಿಯಲ್ಲಿರುವ ಕೆ.ಆರ್. ಪೇಟೆ ಸಾರಿಗೆ ಬಸ್ ನಿಲ್ದಾಣಕ್ಕೆ ಮೇಲ್ದರ್ಜೆಗೇರುವ ಯೋಗ ಕಳೆದ ಮೂರು ದಶಕಗಳಿಂದಲೂ ಕೂಡಿಬಂದಿಲ್ಲ.
ಭಾರಿ ಮಳೆ ಸುರಿಯಿತೆಂದರೆ ಸಾಕು ಬಸ್ ನಿಲ್ದಾಣದಲ್ಲಿರುವ ಸಾರಿಗೆ ಸಿಬ್ಬಂದಿ, ಅಂಗಡಿ ಮಾಲೀಕರು ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಶುರುವಾಗುತ್ತದೆ. ಬಸ್ ನಿಲ್ದಾಣದಲ್ಲಿ ಸೊಂಟದ ಮಟ್ಟ ನೀರು ತುಂಬಿ ಹೊರಗೆ ಹೋಗದ ಪರಿಸ್ಥಿತಿ ಉದ್ಭವಿಸುವುದರಿಂದ ಕೆ.ಆರ್. ಪೇಟೆ ಬಸ್ ನಿಲ್ದಾಣ ಎಂದರೆ ಪ್ರಯಾಣಿಕರಿಗೆ ಆತಂಕ ಮನೆ ಮಾಡುತ್ತದೆ.
ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ, ಬಸ್ ನಿಲ್ದಾಣದ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಹೀಗಾಗಿ ಜನರು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಹಿಡಿಶಾಪ ಹಾಕುತ್ತಾರೆ.
1986ಕ್ಕೆ ಮುಂಚೆ ಕೆ.ಆರ್. ಪೇಟೆಯಲ್ಲಿ ಸಾರಿಗೆ ಬಸ್ ನಿಲ್ದಾಣ ಇರಲಿಲ್ಲ. ಹಳೆ ಪುರಸಭೆಯ ಮುಂದಿನ ಜಾಗವೇ ಬಸ್ ನಿಲ್ದಾಣವಾಗಿತ್ತು. ಆಗ ಮೊದಲ ಬಾರಿಗೆ ಶಾಸಕರಾದ ಕೃಷ್ಣ ಅವರು ಕೆ.ಆರ್. ಪೇಟೆಗೆ ಬಸ್ ನಿಲ್ದಾಣದ ಅಗತ್ಯವನ್ನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ದೇವೇಗೌಡರ ಗಮನಕ್ಕೆ ತಂದು ಸಾರಿಗೆ ಬಸ್ ನಿಲ್ದಾಣವನ್ನು ಮಂಜೂರು ಮಾಡಿಸಿದರು.
ಸ್ಥಳದ ಸಮಸ್ಯೆ ಎದುರಾದಾಗ ಕಂಡುಬಂದಿದ್ದೇ ಈ ಚೆನ್ನಪ್ಪನ ಕಟ್ಟೆ ಎಂಬ ವಿಶಾಲವಾದ ಕೆರೆ. ತ್ಯಾಜ್ಯಗಳಿಂದ ತುಂಬಿ ಒತ್ತುವರಿಯಾಗುವ ಆತಂಕದಲ್ಲಿದ್ದ ಈ ಕೆರೆಯ ವಿಶಾಲವಾದ ಜಾಗದಲ್ಲಿಯೇ ಬಸ್ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.
‘1986ರಲ್ಲಿ ಬಸ್ ನಿಲ್ದಾಣ ನಿರ್ಮಾಣವಾದ ನಂತರ ಮತ್ತೆ ಎರಡು ಬಾರಿ ಮೇಲ್ದರ್ಜೆಗೆ ಏರಿಸಲಾಯಿತಾದರೂ ಭಾರಿ ಮಳೆಯಾದಾಗ ಮೇಲಿನಿಂದ ಬರುವ ನೀರು ನಿಲ್ದಾಣದಲ್ಲಿ ನಿಲ್ಲದೆ ಹೊರಗೆ ಹೋಗುವಂತೆ ಮಾಡುವ ಬಗ್ಗೆ ಕ್ರಿಯಾಯೋಜನೆ ತಯಾರಿಸದೆ ತೇಪೆ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದರಿಂದಲೇ ಇಂದು ಬಸ್ ನಿಲ್ದಾಣ ಕೆರೆಯಾಗುತ್ತಿದೆ’ ಎಂದು ಸಾರ್ವಜನಿಕರ ದೂರಿದರು.
‘ಕಳೆದ ಮೂರು ಅವಧಿಯಲ್ಲಿ ತಾಲ್ಲೂಕಿನಲ್ಲಿ ಹಲವರು ಶಾಸಕರಾಗಿದ್ದಾರೆ, ಮಂತ್ರಿಯಾಗಿದ್ದಾರೆ, ವಿಧಾನಸಭಾ ಅಧ್ಯಕ್ಷರಾಗಿದ್ದಾರೆ. ಆದರೆ 30 ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಇನ್ನೂ ಸಿಗದಿರುವದು ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಸೂಚಿಸುತ್ತದೆ’ ಎಂದು ರೈತಸಂಘದ ಮುಖಂಡ ಮರುವನಹಳ್ಳಿ ಶಂಕರ್ ಆರೋಪ ಮಾಡಿದರು.
‘ಪ್ರತಿ ವರ್ಷ ಧಾರಾಕಾರವಾಗಿ ಸುರಿಯುವ ಮಳೆಗೆ ಬಸ್ ನಿಲ್ದಾಣ ಕೆಸರುಗದ್ದೆಯಂತಾಗುತ್ತದೆ. ವಿವಿಧ ಊರುಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿರುವವರು ಅತಂತ್ರರಾಗುತ್ತಾರೆ. ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯವರು ನಾಡದೋಣಿ ಬಳಸಿ ಪ್ರಯಾಣಿಕರ ರಕ್ಷಣೆ ಮಾಡುವುದು ಇಲ್ಲಿ ಸಾಮಾನ್ಯ ವಿಷಯವಾಗಿದೆ’ ಎಂದು ಪುರಸಭಾ ಸದಸ್ಯ ಎಚ್.ಆರ್. ಲೋಕೇಶ್ ಮತ್ತು ಸ್ಥಳೀಯ ಮುಖಂಡ ಕೆ.ಎಸ್. ರಾಜೇಶ್
ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸಾರಿಗೆ ಸಚಿವ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸುಸಜ್ಜಿತ ಬಸ್ ನಿಲ್ದಾಣವೇ ನನ್ನ ಮೊದಲ ಆದ್ಯತೆ– ಎಚ್.ಟಿ.ಮಂಜು ಶಾಸಕ ಕೆ.ಆರ್.ಪೇಟೆ
ಚನ್ನಪ್ಪನ ಕಟ್ಟೆಯನ್ನು ಎತ್ತರ ಮಾಡದೇ ಕಟ್ಟೆಯೊಳಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸುವ ಮುನ್ನ ಬಸ್ ನಿಲ್ದಾಣವನ್ನು ಎತ್ತರಿಸಲು ಕ್ರಮ ಕೈಗೊಳ್ಳಬೇಕು.
– ಕೆ.ಸಿ. ಮಂಜುನಾಥ್, ಪುರಸಭಾ ಸದಸ್ಯ, ಕೆ.ಆರ್.ಪೇಟೆ
ತಾಂತ್ರಿಕವಾಗಿ ಆಲೋಚಿಸದೆ ನಿಲ್ದಾಣ ನಿರ್ಮಿಸಿರುವುದರಿಂದಲೇ ಪದೇ ಪದೇ ಬಸ್ ನಿಲ್ದಾಣವು ನೀರಿನಲ್ಲಿ ಮುಳುಗಲು ಕಾರಣವಾಗಿದೆ. ನಿಲ್ದಾಣವನ್ನು ರಸ್ತೆ ಮಟ್ಟಕ್ಕೆ ಎತ್ತರಿಸಿ, ಹೊರಗಡೆಯಿಂದ ಬರುವ ನೀರು ನಿಲ್ಲದಂತೆ ಡ್ರೈನೇಜ್ ಪೈಪ್ಲೈನ್ ಅಳವಡಿಸಬೇಕು
– ಕೆ.ಎಸ್.ಸುರೇಶ್ ಕುಮಾರ್, ಕಾರ್ಯದರ್ಶಿ, ನಾಗರಿಕ ಹಿತರಕ್ಷಣಾ ಸಮಿತಿ
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗುವ ಬಹುತೇಕ ಬಸ್ಗಳು ಇಲ್ಲಿಗೆ ಬಂದೇ ಹೋಗಬೇಕಿದೆ. ಆದ್ದರಿಂದ ಮಳೆ ನೀರು ನಿಲ್ಲದಂತೆ ತಾಂತ್ರಿಕ ಕ್ರಮ ಕೈಗೊಳ್ಳಲು, ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಇಲಾಖೆ ಕ್ರಿಯಾಯೋಜನೆ ರೂಪಿಸುತ್ತಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
– ಉಮಾ ಮಹೇಶ್ವರಿ, ಡಿಪೊ ಮ್ಯಾನೇಜರ್, ಕೆ.ಆರ್.ಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.