
ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ತ್ರಿವೇಣಿ ಸಂಗಮದ ಹಿನ್ನೀರಿನಲ್ಲಿರುವ ಕಲ್ಲಹಳ್ಳಿಯ ಭೂವರಾಹನಾಥಸ್ವಾಮಿ ಕ್ಷೇತ್ರದಲ್ಲಿ ಹೊಯ್ಸಳ ಅರಸರ ಕಾಲದಲ್ಲಿ ಭೂದೇವಿ ಸಮೇತ ಪ್ರತಿಷ್ಠಾಪನೆ ಆಗಿರುವ ಭೂವರಹನಾಥಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಮತ್ತು ಪಟ್ಟಾಭಿಷೇಕ ಶ್ರದ್ಧಾ ಭಕ್ತಿಯಿಂದ ನಡೆದವು.
ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಪಟ್ಟಾಭಿಷೇಕ ಕಾರ್ಯಕ್ರಮ ಕಣ್ತುಂಬಿಕೊಂಡರು.
58 ಬಗೆಯ ವಿವಿಧ ಪುಷ್ಪಗಳಿಂದ ಪುಷ್ಪಭಿಷೇಕ ಮಾಡಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಲೋಕಕಲ್ಯಾಣಾರ್ಥವಾಗಿ ನಡೆಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಟ್ರಸ್ಟಿ ಶ್ರೀನಿವಾಸ ರಾಘವನ್ ತಿಳಿಸಿದರು.
ತಿರುಮಲ ತಿರುಪತಿಯ ಮಾದರಿಯಲ್ಲಿ ದೇವಾಲಯವನ್ನು ಹೊಯ್ಸಳ ವಾಸ್ತು ಶಿಲ್ಪ ವೈಭವದ ಮಾದರಿಯಲ್ಲಿ ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ನಿರ್ಮಿಸಿ ಮೂರನೇ ವೀರ ಬಲ್ಲಾಳನಿಗೆ ಸಮರ್ಪಿಸುವ ಕಾರ್ಯ ಭರದಿಂದ ನಡೆಯುತಿದ್ದು, ಮುಂದಿನ ಮೂರು ತಿಂಗಳಲ್ಲಿ ಎರಡನೇ ಪ್ರಾಕಾರವು ಲೋಕಾರ್ಪಣೆಯಾಗಲಿದ್ದು, ಮೂರನೇ ಪ್ರಕಾರಕ್ಕೆ 176 ಅಡಿ ಎತ್ತರದ ಬೃಹತ್ ರಾಜಗೋಪುರ ಹಾಗೂ 186 ಕಾಲುಗಳ ಮುಖಮಂಟಪಕ್ಕೆ ಸಿದ್ಧತೆ ನಡೆದಿದೆ.
ಮೈಸೂರಿನ ಪರಕಾಲ ಮಠದ ಪರಕಾಲ ಸ್ವಾಮಿಗಳ ನೇತೃತ್ವದಲ್ಲಿ ಭಕ್ತರ ಸಹಕಾರದಿಂದ ಈ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದರು. ಪೂಜಾ ಕಾರ್ಯದಲ್ಲಿ ನೂರಾರು ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು. ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ವಿವಿಧ ಬಗೆಯ ಪ್ರಸಾದವನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.