
ಕೆ.ಆರ್.ಪೇಟೆ: ‘ತಾಲ್ಲೂಕಿನಲ್ಲಿ ಖರೀದಿಸಿದ ರಾಗಿಯನ್ನು ಆಯಾ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಬೇಕು. ಬೇರೆ ಜಿಲ್ಲೆಗಳಿಂದ ತರಿಸಿ ವಿತರಿಸುತ್ತಿರುವುದರಿಂದ ಅಕ್ರಮಗಳು ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾನೂನು ಜಾರಗೊಳಿಸಬೇಕು’ ಎಂದು ಶಾಸಕ ಎಚ್. ಟಿ. ಮಂಜು ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನಾಗರೀಕ ಸರಬರಾಜು ಮಂಡಳಿಯ ವತಿಯಿಂದ ಆಯೋಜಿಸಿದ್ದ ರಾಗಿ ಖರೀದಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
‘ರೈತರು ತಾವು ಬೆಳೆದ ರಾಗಿಯ ಗುಣಮಟ್ಟವನ್ನು ಕಾಪಾಡಿ ಮಾರಾಟ ಮಾಡುತ್ತಾರೆ. ಆದರೆ ಮಧ್ಯವರ್ತಿಗಳು ಬೇರೆ ಭಾಗಗಳಿಂದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ ನಮ್ಮದೆ ರೈತರ ಆರ್ಟಿಸಿ ದುರುಪಯೋಪಡಿಸಿಕೊಂಡು ಸರ್ಕಾರಕ್ಕೆ ಮಾರಾಟ ಮಾಡುತ್ತಾರೆ. ಇದರ ಬಗೆಗೆ ಅಧಿಕಾರಿಗಳು ಏಕೆ ಕ್ರಮವಹಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಕಳೆದ ಬಾರಿ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ರಾಗಿಯನ್ನು ವಿತರಿಸಲಾಗಿದೆ ಎಂದು ರೈತಸಂಘದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಆಹಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಬಂದು ಸಭೆಯನ್ನು ನಡೆಸಿ ಹಾಸನ ಜಿಲ್ಲೆಯ ಜಾವಗಲ್ ಗೋದಾಮಿನಿಂದ ತರಿಸಿಕೊಂಡು ಹಂಚಲಾಗಿದೆ ಎಂದು ತಿಳಿಸಿ ಕ್ರಮ ವಹಿಸುವುದಾಗಿ ಹೇಳಿದ್ದರು. ಈ ಬಗ್ಗೆ ಮಾಹಿತಿ ಪಡೆದು ಸರಬರಾಜುದಾರರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೆ. ಆದರು ಕೂಡಾ ಕ್ರಮವಾಗಿಲ್ಲ. ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ನೋವಾಗುವುದಿಲ್ಲವೆ’ ಎಂದರು.
ತಾಲ್ಲೂಕಿನ ರಾಗಿ ಖರೀದಿ ಕೇಂದ್ರದಲ್ಲಿ ಇಂತಹದ್ದಕ್ಕೆಲ್ಲಾ ಯಾವುದೇ ಕಾರಣಕ್ಕೂ ಅಧಿಕಾರಿಗಳು ಅವಕಾಶ ನೀಡಬಾರದೆಂದು ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಞ ತೆರ್ನೇನಹಳ್ಳಿ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ನಾಗರಾಜೇಗೌಡ, ಎಪಿಎಂಸಿ ಕಾರ್ಯದರ್ಶಿ ವಿದ್ಯಾ, ಕೆಎಸ್ಎಫ್ಸಿ ವ್ಯವಸ್ಥಾಪಕ ಮನೋಹರ್, ಮುಖಂಡ ಪಿಕೆಜಿ ಮಹೇಶ್ ಭಾಗವಹಿಸಿದ್ದರು.
ಈ ಬಾರಿ ತಾಲ್ಲೂಕಿನಲ್ಲಿ 3563 ರೈತರು ಹೆಸರು ನೋಂದಾಯಿಸಿದ್ದು ಒಟ್ಟು 107670 ಕ್ವಿಂಟಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ರೈತರು ಯಾವುದೇ ಗೊಂದಲಕ್ಕೊಳಗಾಗದೆ ಗುಣಮಟ್ಟದ ರಾಗಿ ಪೂರೈಸಿಎಚ್.ಟಿ.ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.