ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಅಣೆಕಟ್ಟೆಯ ವಿಶ್ವೇಶ್ವರಯ್ಯ ನಾಲೆ ಮತ್ತು ನದಿ ಒಡ್ಡಿನ ಚಿಕ್ಕದೇವರಾಜಸಾಗರ ನಾಲೆಗೆ ಮಂಗಳವಾರ ರಾತ್ರಿಯಿಂದ ನೀರು ಬಿಡುಗಡೆ ಮಾಡಲಾಗಿದೆ.
ವಿಶ್ವೇಶ್ವರಯ್ಯ ನಾಲೆಗೆ ಜಲಾಶಯದಿಂದ ಸದ್ಯ 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಹಂತ ಹಂತವಾಗಿ 2500 ಕ್ಯೂಸೆಕ್ಗೆ ಹೆಚ್ಚಿಸಲಾಗುತ್ತದೆ. ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ 13 ಕೆರೆಗಳನ್ನು ತುಂಬಿಸಲು ನೀರು ಬಿಡಲಾಗಿದೆ. ಇರೋಡೆ ಕೆರೆ, ಅರಕೆರೆ ಕೆರೆ, ಕೊಡಗಹಳ್ಳಿ ಕೆರೆ, ಮಾದಹಳ್ಳಿ ಕೆರೆ, ಡಾಮಡಹಳ್ಳಿ ಕೆರೆ ಇತರ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿ. ಜಯಂತ್ ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ನಾಲೆಯ ಮಳವಳ್ಳಿ ಸಂಪರ್ಕ ನಾಲೆ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 24 ಕಿ.ಮೀ. ಪೈಕಿ ಇನ್ನೂ 6 ಕಿ.ಮೀ.ನಷ್ಟು ಕಾಮಗಾರಿ ಬಾಕಿ ಇದ್ದು, ನೀರು ಬಿಡುವುದು ತಡವಾಗಲಿದೆ ಎಂದು ಅವರು ಹೇಳಿದ್ದಾರೆ.
ನದಿ ಒಡ್ಡಿನ ನಾಲೆಗಳ ಪೈಕಿ ಸದ್ಯ ಚಿಕ್ಕದೇವರಾಜ ಸಾಗರ ನಾಲೆಗೆ ಮಾತ್ರ ನೀರು ಬಿಡಲಾಗಿದೆ. ವಿರಿಜಾ, ರಾಜಪರಮೇಶ್ವರಿ, ರಾಮಸ್ವಾಮಿ ಮತ್ತು ಇತರ ನಾಲೆಗಳಲ್ಲಿ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಕೆಲಸ ಮುಗಿಯಲಿದ್ದು, ಬಳಿಕ ಈ ನಾಲೆಗಳಿಗೂ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಆರ್ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ರೈತರ ಸಂಘ ಹಾಗೂ ಇತರ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದವು.
ವಿಶ್ವೇಶ್ವರಯ್ಯ ನಾಲೆಯ ಮಳವಳ್ಳಿ ಸಂಪರ್ಕ ನಾಲೆ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 24 ಕಿ.ಮೀ. ಪೈಕಿ ಇನ್ನೂ 6 ಕಿ.ಮೀ.ನಷ್ಟು ಕಾಮಗಾರಿ ಬಾಕಿ ಇದ್ದು ನೀರು ಬಿಡುವುದು ತಡವಾಗಲಿದೆವಿ. ಜಯಂತ್ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.