
ಪಾಂಡವಪುರ: ತಾಲ್ಲೂಕಿನ ಕ್ಯಾತನಹಳ್ಳಿ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಟೂರ್ನಿಯಲ್ಲಿ ಕ್ಯಾತನಹಳ್ಳಿಯ ವೈ.ಸಿ.ಎಸ್. ತಂಡ ಪ್ರಥಮ ಸ್ಥಾನ ಪಡೆದು ಕೆಎಸ್ಪಿ ಕಪ್ ಮುಡಿಗೇರಿಸಿಕೊಂಡಿತು.
ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಮತ್ತು ಕ್ರೀಡಾ ಒಕ್ಕೂಟ ಕ್ಯಾತನಹಳ್ಳಿ ಹಾಗೂ ಮಂಡ್ಯ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಸಮಾಜ ಸೇವಕ ವೈದ್ಯ ದಿ.ಡಾ.ಕೆ.ವೈ.ಶ್ರೀನಿವಾಸ್ ಅವರ ನೆನಪಿನಲ್ಲಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾರಥ್ಯದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಆಯೋಜಿಸಲಾಗಿತ್ತು. ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳ 50 ತಂಡಗಳು ಭಾಗವಹಿಸಿದ್ದವು.
ಭಾನುವಾರ ರಾತ್ರಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಿತು. ಕ್ಯಾತನಹಳ್ಳಿಯ ವೈ.ಸಿ.ಎಸ್ ತಂಡ ಪ್ರಥಮ ಬಹುಮಾನ ₹75 ಸಾವಿರ, ಮೇಟಗಳ್ಳಿಯ ಸಂಯುಕ್ತ ತಂಡ ದ್ವೀತಿಯ ಬಹುಮಾನ ₹40 ಸಾವಿರ, ನಾಗನಹಳ್ಳಿಯ ಲಕ್ಷ್ಮಿದೇವಿ ತಂಡ ತೃತೀಯ ಬಹುಮಾನ ₹20 ಸಾವಿರ ಹಾಗೂ ಕೆನ್ನಾಳು ಕದಂಬ ತಂಡ ನಾಲ್ಕನೆ ಬಹುಮಾನ ₹15 ಸಾವಿರ ಹಾಗೂ ಟ್ರೋಫಿ ಪಡೆದವು.
ಶನಿವಾರ ಸಂಜೆ ಕಬಡ್ಡಿ ಟೂರ್ನಿಗೆ ಜಿಲ್ಲಾಧಿಕಾರಿ ಕುಮಾರ ಚಾಲನೆ ನೀಡಿದರು. ಭಾನುವಾರ ನಡೆದ ಸಮಾರೋಪದ ಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದ ಸ್ವಾಮೀಜಿ ವಹಿಸಿದ್ದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡಪ್ಪ, ರಾಘವ ಪ್ರಕಾಶ್, ತರಬೇತುದಾರರಾದ ತುಳಸಿದಾಸ್, ಉಮೇಶ್, ಗಿರೀಶ್, ದೀಪು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.