
ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ, ಮಕರ ಸಂಕ್ರಾಂತಿಯ ನಿಮಿತ್ತ ಗುರುವಾರ ಏರ್ಪಡಿಸಿದ್ದ ಲಕ್ಷ ದೀಪೋತ್ಸವ ಕಣ್ಮ ಸೂರೆಗೊಂಡಿತು.
ದೇವಾಲಯದಿಂದ ಮಿನಿ ವಿಧಾನಸೌಧ ವೃತ್ತದ ವರೆಗೆ, ಸುಮಾರು 150 ಮೀಟರ್ ಉದ್ದಕ್ಕೂ ಸಹಸ್ರಾರು ದೀಪಗಳು ಜಗಮಗಿಸಿದವು. ನೆಲದ ಮೇಲೆ 10 ಸಾಲು ಹಾಗೂ ಎಡ ಮತ್ತು ಬಲ ಬದಿಯಲ್ಲಿ ಕಟ್ಟಿದ್ದ ಅಡಿಕೆ ದಬ್ಬೆಗಳ ಮೇಲೆ 10 ಸಾಲುಗಳಲ್ಲಿ ಮಣ್ಣಿನ ದೀಪಗಳನ್ನು ಇರಿಸಿ ಬೆಳಗಿಸಲಾಯಿತು.
ಶಾಸಕ ರಮೇಶ ಬಂಡಿಸಿದ್ದೇಗೌಡ ಗೋಧೂಳಿ ಲಗ್ನದಲ್ಲಿ, ಸಂಜೆ 6.30ಕ್ಕೆ ದೀಪೋತ್ಸವಕ್ಕೆ ಚಾಲನೆ ನೀಡಿದರು. ಶ್ರೀರಂಗನಾಥಸ್ವಾಮಿ ದೇಗುಲದ ರಾಯಗೋಪುರದ ಮುಂದೆ ಲೋಕ ಕಲ್ಯಾಣಕ್ಕಾಗಿ ಹೋಮ, ಹವನಗಳು ನಡೆದವು. ದೇವಾಲಯ ಮತ್ತು ಮಿನಿ ವಿಧಾನಸೌಧ ವೃತ್ತದಲ್ಲಿ ಶ್ರೀರಂಗ, ಓಂ, ಸ್ವಸ್ತಿಕ್, ಸುಸ್ವಾಗತ ಇತರ ಆಕಾರಗಳನ್ನು ದೀಪಗಳನ್ನು ಜೋಡಿಸಿ ಬೆಳಗಲಾಯಿತು. ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಮತ್ತು ಪೇಟೆ ನಾರಾಯಣಸ್ವಾಮಿ ದೇವಾಲಯಗಳ ಆವರಣದಲ್ಲಿ ಮಣ್ಣಿನ ಹಣತೆಗಳು ಬೆಳಗಿದವು. ಭಕ್ತರು ದೀಪದಿಂದ ದೀಪ ಹಚ್ಚಿ ಭಕ್ತಿ ಭಾವ ಮೆರೆದರು.
ಶ್ರೀರಂಗನಾಥಸ್ವಾಮಿ ದೇವರ ಮೂರ್ತಿಗೆ ಬೆಣ್ಣೆಯಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಗ್ರ ಪೂಜೆ ಬಳಿ ಸ್ವರ್ಗದ ಬಾಗಿಲು ತೆರೆದು ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಸ್ಥಳೀಯರು ಮಾತ್ರವಲ್ಲದೆ ಮಂಡ್ಯ, ಮೈಸೂರು, ಪಾಂಡವಪುರ ಇತರ ಕಡೆಗಳಿಂದ ಜನರು ಆಗಮಿಸಿ ದೀಪೋತ್ಸವವನ್ನು ಕಣ್ತುಂಬಿಕೊಂಡರು. ಜನ ದಟ್ಟಣೆಯಿಂದಾಗಿ ದೇವಾಲಯದ ಪ್ರವೇಶ ದ್ವಾರದಲ್ಲಿ ನೂಕು ನುಗ್ಗಲು ಉಂಟಾಯಿತು. ಪೊಲೀಸರನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.