
ಚಿರತೆ
(ಪ್ರಾತಿನಿಧಿಕ ಚಿತ್ರ)
ಭಾರತೀನಗರ: ಸಮೀಪದ ಮೆಣಸಗೆರೆ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಬುಧವಾರ ಬೆಳಿಗ್ಗೆ ಕುರಿಯೊಂದನ್ನು ಹೊತ್ತೊಯ್ದಿದೆ.
ಇದೇ ಚಿರತೆ ಮೆಣಸಗೆರೆ ಸಮೀಪದ ಕಾಳಗೆಂಪನದೊಡ್ಡಿ ಬಳಿ ಕಾಣಿಸಿಕೊಂಡು ಜನರನ್ನು ಗಾಬರಿಗೊಳಿಸಿತ್ತು, ಕಳೆದ ಮೂರು ದಿನಗಳಿಂದ ಮೆಣಸಗೆರೆ ಗ್ರಾಮದ ಮನೆಗಳ ಬಳಿ, ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲೂ ಕಾಣಿಸಿಕೊಂಡಿದೆ. ಗ್ರಾಮದ ಮುಖಂಡ ಪಟೇಲ್ ಉಮೇಶ್ ಅವರ ಮನೆ ಬಳಿಯಿಂದ ನಾಯಿಯೊಂದನ್ನು ಹೊತ್ತೊಯ್ದು, ತುಸು ದೂರಲ್ಲಿನ ಕಬ್ಬಿನ ಗದ್ದೆಯಲ್ಲಿ ನಾಯಿಯನ್ನು ತಿಂದು ಹಾಕಿದೆ. ಇದರಿಂದ ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ್ದು ಬಿಟ್ಟರೆ ಚಿರತೆ ಸೆರೆಗೆ ಯಾವುದೇ ರೀತಿಯ ಕ್ರಮವನ್ನು ವಹಿಸಿಲ್ಲ ಎಂದು ಗ್ರಾಮ ಮುಖಂಡರಾದ ಪಟೇಲ್ ಉಮೇಶ್, ಪ್ರಕಾಶ್, ಡಿ.ಎಲ್.ಸತೀಶ್ (ಕೋಡಹಳ್ಳಿ) ಆರೋಪಿಸಿದ್ದಾರೆ. ಕೂಡಲೇ ಬೋನನ್ನು ಇರಿಸಿ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.