
ಮದ್ದೂರು: ನಗರಸಭೆಗೆ ಸೇರ್ಪಡೆ ವಿರೋಧಿಸಿ ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು 65ನೇ ದಿನ ಪೂರೈಸಿದ್ದು, ಬುಧವಾರ ರಾತ್ರಿ ಅಹೋರಾತ್ರಿ ಧರಣಿಯ ಸ್ವರೂಪ ಪಡೆದುಕೊಂಡಿದೆ.
ಈ ವೇಳೆ ರೈತ ಪರ ಹೋರಾಟಗಾರರಾದ ಸುನಂದ ಜಯರಾಮು ಮಾತನಾಡಿ, 65 ದಿನಗಳಿಂದ ನಗರಸಭೆಗೆ ಗೆಜ್ಜಲಗೆರೆ ಗ್ರಾ.ಪಂ ಸೇರ್ಪಡೆ ವಿರೋಧಿಸಿ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ಪಂಚಾಯಿತಿಗಳನ್ನು ಪಂಚಾಯಿತಿಯಾಗೆ ಉಳಿಸಲು ಕ್ರಮ ಕೈಗೊಂಡಿಲ್ಲ ಎಂದರು.
ಗೆಜ್ಜಲಗೆರೆ ಗ್ರಾ.ಪಂ.ನಲ್ಲಿರುವ ದಾಖಲೆಗಳನ್ನು ಹಾಗೂ ಕಡತಗಳನ್ನು ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೊರಗಡೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಬುಧವಾರ ರಾತ್ರಿಯಿಂದ ಪಂಚಾಯಿತಿ ಆವರಣದಲ್ಲಿ ಗ್ರಾಮಸ್ಥರು, ಮಹಿಳೆಯರು ಅಹೋರಾತ್ರಿ ಧರಣಿ ಮುಂದುವರೆಸಲು ತೀರ್ಮಾನಿಸಿದ್ದಾರೆ ಎಂದರು.
ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಗ್ರಾ.ಪಂಗಳನ್ನು ಕೈ ಬಿಡುವವರೆಗೂ ನಿರಂತರವಾಗಿ ಧರಣಿ ಮುಷ್ಕರ ಮುಂದುವರೆಯಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಖಂಡರಾದ ಜಿ.ಪಿ.ಯೋಗೇಶ್, ಜಿ.ಟಿ.ಚಂದ್ರಶೇಖರ್, ಮೋಹನ, ವೀರಪ್ಪ, ಪ್ರಕಾಶ್, ಮಂಜುನಾಥ್, ಸತ್ಯವತಿ, ಗೌರಮ್ಮ, ಶಾಂತಮ್ಮ ಹಾಜರಿದ್ದರು.