ಮದ್ದೂರು: ‘ತಾಲ್ಲೂಕಿನ ಕೊಪ್ಪದ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಬಡ್ಡಿ ರಹಿತ ಸಾಲ, ಮಧ್ಯಮ ಅವಧಿ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳು ದೊರಕಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೊಪ್ಪದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಹಕಾರ ಸಂಘಗಳಿಗೆ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಸವಲತ್ತು ಕಲ್ಪಿಸುತ್ತಿದ್ದು, ಸದ್ಬಳಕೆ ಮಾಡಿಕೊಂಡು ಸಂಘಗಳು ಅಭಿವೃದ್ಧಿ ಹೊಂದುವ ಜತೆಗೆ ರೈತರಿಗೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಲಿಂಗರಾಜು ಮಾತನಾಡಿ, ‘ಕೊಪ್ಪದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 3,500 ಷೇರುದಾರರು ಇದ್ದು, ₹10 ಕೋಟಿ ಬಡ್ಡಿ ರಹಿತ ಬೆಳೆ ಸಾಲ ನೀಡಲಾಗಿದೆ. ₹6 ಕೋಟಿ ಮಧ್ಯಮ ಅವಧಿ ಸಾಲ ನೀಡಲಾಗಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ₹1 ಕೋಟಿ ಸಾಲ ನೀಡುವ ಜತೆಗೆ ರೈತರಿಗೆ ಸಕಾಲಕ್ಕೆ ಸಾಲ, ಬಿತ್ತನೆ ಬೀಜ, ರಸಗೊಬ್ಬರ ಕಲ್ಪಿಸಲಾಗುತ್ತಿದೆ’ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಪಿ.ಸಂದರ್ಶ, ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೊಪ್ಪದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ, ನಿರ್ದೇಶಕರಾದ ಎಚ್.ಬಿ.ಶಿವಣ್ಣ, ಕೆ.ಜೆ.ಕೃಷ್ಣೇಗೌಡ, ರಾಮಕೃಷ್ಣ, ಕೆ.ರಮೇಶ, ಟಿ.ಕಾಂತರಾಜು, ಕೆ.ಜಿ.ಜಯರಾಮು, ಜಿ.ಪಿ.ಮಂಜುಳ, ಸಿಇಒ ಮಹಾದೇವು, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಗ್ರಾ.ಪಂ ಸದಸ್ಯ ಕುಮಾರ್ ಕೊಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.