ADVERTISEMENT

ಮಳವಳ್ಳಿ: ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಹರಿದು ಬಂದ ಜನಸಾಗರ

ವಿದ್ಯುತ್ ದೀಪಾಲಂಕಾರದ ವೈಭವ: ಘಟ್ಟಗಳ ಮೆರವಣಿಗೆಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:12 IST
Last Updated 31 ಜನವರಿ 2026, 6:12 IST
ಮಳವಳ್ಳಿ ಪಟ್ಟಣದ ಪಟ್ಟಲದಮ್ಮನ ದೇವರು
ಮಳವಳ್ಳಿ ಪಟ್ಟಣದ ಪಟ್ಟಲದಮ್ಮನ ದೇವರು   

ಮಳವಳ್ಳಿ: ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಶುಕ್ರವಾರ ವಿವಿಧ ಧಾರ್ಮಿಕ ಆಚರಣೆಯ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಪಟ್ಟಣದ ಸುಲ್ತಾನ್ ರಸ್ತೆಯ ಪಟ್ಟಲದಮ್ಮನ ದೇವರು ಈ ಭಾಗದ ಏಕತೆಯ ಸಂಕೇತವಾಗಿದೆ. ಪಟ್ಟಣದ ಎಲ್ಲ ಸಮುದಾಯದವರು ಗ್ರಾಮದೇವತೆ ಪಟ್ಟಲದಮ್ಮನ ಸಿಡಿಹಬ್ಬ ಆಚರಿಸುತ್ತಾರೆ. ಪಟ್ಟಣದ ಸುಲ್ತಾನ್ ರಸ್ತೆಯ ವಳಗೆರೆ ಹುಚ್ಚಮ್ಮ ಹಾಗೂ ಪಟ್ಟಲದಮ್ಮ ದೇವಸ್ಥಾನಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ದೇವರಿಗೆ ವಿವಿಧ ಹೋಮ-ಹವನ ಮತ್ತು ಅಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವರ ವಿಗ್ರಹಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ವಿವಿಧೆಡೆಯ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಸರದಿ ಸಾಲಿನಲ್ಲಿ ತೆರಳಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು.

ADVERTISEMENT

ದೇವಸ್ಥಾನದ ಆವರಣವನ್ನು ವಿಶೇಷವಾಗಿ ಹಸಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು. ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಿದರು.

ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಅಳವಡಿಸಿದ ಮತ್ತು ಪ್ರಮುಖವಾಗಿ ಪಟ್ಟಣದ ಪ್ರವೇಶದ್ವಾರಗಳಲ್ಲಿನ ಹಾಗೂ ಅನಂತ್ ರಾಂ ವೃತ್ತದ ಬಳಿಯ ಹೂವಿನ ಮಾದರಿ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು.

ಸಂಪ್ರದಾಯದಂತೆ ಶುಕ್ರವಾರ ಸಂಜೆ ಪಟ್ಟಣದ ಪೇಟೆ ಬೀದಿ, ತಾಲ್ಲೂಕಿನ ತಮ್ಮಡಹಳ್ಳಿ, ಕ್ಯಾತೇಗೌಡನದೊಡ್ಡಿ, ಮಾರೇಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ರಾಸುಗಳನ್ನು ಶೃಂಗರಿಸಿಕೊಂಡು ಶನಿವಾರ ಬೆಳಿಗ್ಗೆ ನಡೆಯುವ ಕೊಂಡೋತ್ಸವಕ್ಕೆ ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ಸೌದೆ ತೆಗೆದುಕೊಂಡು ಸಾಗಿದ 2 ಕೀ.ಮೀ ಉದ್ದದ ಮೆರವಣಿಗೆಯು ಪೇಟೆ ಬೀದಿ, ಮದ್ದೂರು ರಸ್ತೆ, ಕೋಟೆ ಬೀದಿ, ಗಂಗಾಧರೇಶ್ವರಸ್ವಾಮಿ ದೇವಸ್ಥಾನ ಬೀದಿಯ ಮೂಲಕ ಪಟ್ಟಲದಮ್ಮನ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಿತು.

ಸಿಡಿ ಬಂಡಿ ಕಟ್ಟುವುದಕ್ಕೆ ಎಲ್ಲ ಸಮುದಾಯಗಳ ಜನರು ಸಂಪ್ರಾದಯದಂತೆ ಸಲಕರಣೆಗಳನ್ನು ನೀಡಿದರು. ಸಿಡಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ 8.30ರ ವೇಳೆ ಆರಂಭವಾದ ಘಟ್ಟದ ಮೆರವಣಿಗೆಗೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಕ್ರಮವಾಗಿ ಪೇಟೆ ಒಕ್ಕಲಿಗೇರಿ, ಸಿದ್ದಾರ್ಥನಗರ, ಕೀರ್ತಿನಗರ, ಗಂಗಾಮತಸ್ಥ ಬೀದಿ, ಅಶೋಕನಗರ ದೊಡ್ಡಪಾಲು, ಚಿಕ್ಕಪಾಲು, ಬಸವಲಿಂಗಪ್ಪನಗರ ಮಹಿಳೆಯರು ನಿಗದಿಪಡಿಸಿದ ಸಮಯದಲ್ಲಿ ಘಟ್ಟಗಳನ್ನು ಹೊತ್ತು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಘಟ್ಟಗಳು ತಮ್ಮದೇ ವೈಶಿಷ್ಟ್ಯತೆಗಳಿಂದ ಕೂಡಿದ್ದವು.

ಐತಿಹಾಸಿಕ ಪಟ್ಟಲದಮ್ಮನ ಸಿಡಿಯನ್ನು ನೋಡಲು ವಿವಿಧೆಡೆಯಿಂದ ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿರುವುದರಿಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಶುಕ್ರವಾರ ರಾತ್ರಿ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.