ADVERTISEMENT

ಸರ್ಕಾರವೇ ಕಬ್ಬು ಖರೀದಿಸಲಿ: ರವೀಂದ್ರ ಶ್ರೀಕಂಠಯ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 12:02 IST
Last Updated 30 ಸೆಪ್ಟೆಂಬರ್ 2019, 12:02 IST
ರವೀಂದ್ರ ಶ್ರೀಕಂಠಯ್ಯ
ರವೀಂದ್ರ ಶ್ರೀಕಂಠಯ್ಯ   

ಮಂಡ್ಯ: ‘ಜಿಲ್ಲೆಯ ಪ್ರಮುಖ ಸಕ್ಕರೆ ಕಾರ್ಖಾನೆಗಳು ಆರಂಭವಾಗದ ಕಾರಣ ಲಕ್ಷಾಂತರ ಟನ್‌ ಕಬ್ಬು ಅವಧಿ ಮೀರುತ್ತಿದೆ. ರೈತರನ್ನು ಸಂರಕ್ಷಣೆ ಮಾಡಲು ಸರ್ಕಾರವೇ ಕಬ್ಬು ಖರೀದಿ ಮಾಡಬೇಕು’ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸೋಮವಾರ ಒತ್ತಾಯಿಸಿದರು.

‘ಅತೀ ಹೆಚ್ಚು ಭತ್ತ ಬೆಳೆದಾಗ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸುತ್ತದೆ. ಅದೇ ಮಾದರಿಯಲ್ಲಿ ಕಬ್ಬಿಗೂ ನ್ಯಾಯಯುತ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು. ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾಗದ ಕಾರಣ ಕಷ್ಟಪಟ್ಟು ಬೆಳೆದ ಕಬ್ಬು 15 ತಿಂಗಳು ಮೀರುತ್ತಿದೆ. ರೈತರು ನಷ್ಟಹೊಂದಿ ಆತ್ಮಹತ್ಯೆಗೆ ಶರಣಾಗುವ ಮೊದಲು ಸರ್ಕಾರವೇ ಕಬ್ಬು ಖರೀದಿ ಮಾಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಖಾಸಗಿ ಸಕ್ಕರೆ ಕಾರ್ಖಾನೆಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಳೆಯ ಬಾಕಿಯನ್ನೇ ಪಾವತಿಸಿಲ್ಲ. ಜೇಷ್ಠತೆಯ ಆಧಾರದ ಮೇಲೆ ಒಪ್ಪಿತ ಕಬ್ಬು ಅರೆಯದೇ ಪ್ರಭಾವಿಗಳಿಗೆ ಮಣೆ ಹಾಕಲಾಗುತ್ತಿದೆ. ಕಬ್ಬು ಅರೆಯುವಲ್ಲೂ ಬಡರೈತರಿಗೆ ಅನ್ಯಾಯವಾಗುತ್ತಿದೆ. ಫೀಲ್ಡ್‌ಮ್ಯಾನ್‌ಗಳು ರೈತರನ್ನು ಶೋಷಣೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬೇರೆ ಜಿಲ್ಲೆಗಳ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವಂತೆ ಸೂಚನೆ ನೀಡಲಾಗಿದೆ. ಆದರೆ ಸಾಗಣೆ ವೆಚ್ಚ ಯಾರು ಭರಿಸುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆಲೆಮನೆಗಳಲ್ಲಿ ಬೆಲ್ಲದ ಬೆಲೆ ಪಾತಾಳಕ್ಕೆ ಕುಸಿದಿದ್ದು ಅಲ್ಲೂ ಅರೆಸುವ ಸ್ಥಿತಿ ಇಲ್ಲ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಿ ಕಬ್ಬು ಖರೀದಿಸಬೇಕು. ನಂತರ ಬೇಕಾದಂತೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.