ADVERTISEMENT

ಮಂಡ್ಯ | ಬಡರೋಗಿಗೆ ಸ್ಪಂದಿಸಿ ರಕ್ತ ಪೂರೈಸಿ: ಜಿಲ್ಲಾಧಿಕಾರಿ ಕುಮಾರ

ಮತ್ತೆ ದೂರು ಬಂದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಕುಮಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:48 IST
Last Updated 23 ಜುಲೈ 2025, 2:48 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ಮಿಮ್ಸ್ ವೈದ್ಯರೊಂದಿಗೆ ಮಂಗಳವಾರ ಸಭೆ ನಡೆಸಿದರು. ರೆಡ್‌ಕ್ರಾಸ್‌ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಿಮ್ಸ್‌ ನಿರ್ದೇಶಕ ಡಾ.ನರಸಿಂಹಸ್ವಾಮಿ ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ಮಿಮ್ಸ್ ವೈದ್ಯರೊಂದಿಗೆ ಮಂಗಳವಾರ ಸಭೆ ನಡೆಸಿದರು. ರೆಡ್‌ಕ್ರಾಸ್‌ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಿಮ್ಸ್‌ ನಿರ್ದೇಶಕ ಡಾ.ನರಸಿಂಹಸ್ವಾಮಿ ಪಾಲ್ಗೊಂಡಿದ್ದರು    
ವೈದ್ಯರ ಸ್ವಪ್ರತಿಷ್ಠೆಯಿಂದ ರಕ್ತನಿಧಿ ಕೇಂದ್ರದಲ್ಲಿ ಅವ್ಯವಸ್ಥೆ  | ಬಡ ರೋಗಿಗಳಿಗೆ ಸಮರ್ಪಕವಾಗಿ ಸಿಗದ ರಕ್ತ  | ರಕ್ತದ ಯುನಿಟ್‌ ಹೆಚ್ಚಿಸಲು ಶಿಬಿರ ಆಯೋಜಿಸಿ 

ಮಂಡ್ಯ: ‘ರೋಗಿಗಳ ಜೀವ ಉಳಿಸಲು ತುರ್ತಾಗಿ ರಕ್ತ ಬೇಕಿರುತ್ತದೆ. ರಕ್ತನಿಧಿ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ, ರೋಗಿಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಸಹ ಎದುರಿಸಬೇಕಾಗಬಹುದು. ರಕ್ತನಿಧಿ ಕೇಂದ್ರ ರೋಗಿಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಿಮ್ಸ್ ವೈದ್ಯರೊಂದಿಗೆ ಮಂಗಳವಾರ ಸಭೆ ನಡೆಸಿ ಮಾತನಾಡಿದರು. ಸಾರ್ವಜನಿಕರು ವೈದ್ಯರಿಗೆ ದೇವರ ಸ್ಥಾನ ನೀಡುತ್ತಾರೆ. ವೈದ್ಯರ ಸ್ವ ಪ್ರತಿಷ್ಠೆಯಿಂದ ಮಿಮ್ಸ್ ನಲ್ಲಿರುವ ರಕ್ತಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ರೋಗಿಗಳಿಗೆ ರಕ್ತ ದೊರಕುತ್ತಿಲ್ಲ, ರಕ್ತದಾನ ಶಿಬಿರಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದರೆ ತಲೆ ತಗ್ಗಿಸಬೇಕಿದೆ ಎಂದರು.

ರಕ್ತನಿಧಿ ಕೇಂದ್ರಕ್ಕೆ ಸಂಬಂಧಿಸಿದಂತೆ ಪುನಃ ದೂರುಗಳು ಕೇಳಿಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಿಸಿ ಅವಶ್ಯಕವಿದ್ದಾಗ ಬೇರೆ ಜಿಲ್ಲೆಗೆ ನೀಡಲಾಗುತ್ತಿತ್ತು. ಇಂದು ಮಿಮ್ಸ್‌ಗೆ ಬರುವ ರೋಗಿಗಳು ಖಾಸಗಿ ರಕ್ತನಿಧಿ ಕೇಂದ್ರದಿಂದ ರಕ್ತ ತರಬೇಕು ಎಂದರೆ ಬಡವರಿಗೆ ಕಷ್ಟಕರವಾಗುತ್ತದೆ ಹಾಗೂ ಮಿಮ್ಸ್‌ಗೆ ಬರುವ ರೋಗಿಗಳು ಬಡವರು ಎಂಬುವುದನ್ನು ಮರೆಯಬೇಡಿ’ ಎಂದು ಕಿವಿಮಾತು ಹೇಳಿದರು. 

ಮಾನವೀಯತೆ ಹಾಗೂ ಹೃದಯವಂತಿಕೆಯನ್ನು ರೂಢಿಸಿಕೊಂಡು ಕೆಲಸ ನಿರ್ವಹಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಮಿಮ್ಸ್ ರಕ್ತ ನಿಧಿ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರಕ್ತಕ್ಕೆ ಕೃತಕ ಬೇಡಿಕೆ ಸೃಷ್ಟಿಯಾಗಿ ಹಲವಾರು ತೊಂದರೆ ಉಂಟಾಗುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಿಮ್ಸ್  ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮಿಮ್ಸ್ ಪೆಥಾಲಜಿ, ರಕ್ತ ನಿಧಿ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. 

‘ಅವ್ಯವಸ್ಥೆ ಕೂಡಲೇ ಸರಿಪಡಿಸಿ’

ಮಿಮ್ಸ್‌ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಈ ಹಿಂದೆ ರಕ್ತ ನಿಧಿ ಕೇಂದ್ರ ನಡಯುತ್ತಿದ್ದ ರೀತಿಯಲ್ಲಿ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸುವಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಕುಮಾರ ಸೂಚನೆ ನೀಡಿದರು. ರಕ್ತನಿಧಿ ಕೇಂದ್ರದಲ್ಲಿ ರಕ್ತದ ಯುನಿಟ್ ಹೆಚ್ಚಿಸಲು ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ಶಿಬಿರಗಳನ್ನು ಆಯೋಜಿಸಿ. ಪ್ರತಿದಿನ ರಕ್ತ ನಿಧಿ ಕೇಂದ್ರದ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.