ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಮಂಡ್ಯ ಜಿಲ್ಲಾ ನಾಗರಿಕ ಅಭಿನಂದನೆ ಸಮಿತಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದಂಪತಿಯನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅಭಿನಂದಿಸಿದರು.
ಮಂಡ್ಯ: ‘ನಗುಮುಖ ಇಲ್ಲದವರು ಜನಪ್ರತಿನಿಧಿ, ಮಠಾಧಿಪತಿ, ಅತ್ತೆ– ಸೊಸೆ ಆಗಬಾರದು. ಒಟ್ಟಿನಲ್ಲಿ ನಗುಮುಖವಿಲ್ಲದೇ ಇರುವವರು ಮನುಷ್ಯರೇ ಆಗಬಾರದು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ನಗರದ ಮಂಡ್ಯ ವಿವಿ ಆವರಣದಲ್ಲಿ ಮಂಡ್ಯ ಜಿಲ್ಲಾ ನಾಗರಿಕ ಅಭಿನಂದನೆ ಸಮಿತಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿನ ರೂವಾರಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲಾ ಶಾಸಕರು, ಅಧಿಕಾರಿಗಳು ಹಾಗೂ ಕಸಾಪ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಇದರ ನಾಯಕತ್ವ ವಹಿಸಿದ ಎನ್.ಚಲುವರಾಯಸ್ವಾಮಿ ಅವರು ಸೇರಿದಂತೆ ಉಪಸಮಿತಿಯವರಿಗೆಲ್ಲರಿಗೂ ನಮಿಸುತ್ತೇನೆ. ಸಾಮಾನ್ಯವಾಗಿ ಅದೃಷ್ಟ ಇದ್ದವರಿಗೆ ಗೆಲುವು ದೊರೆಯುತ್ತದೆ. ನಾನು ಕೂಡ ಅದೃಷ್ಟವಂತ. ಏಕೆಂದರೆ ಬಯಸದೇ ಬಂದ ಭಾಗ್ಯವು ಸಮ್ಮೇಳನದಲ್ಲಿ ಸಿಕ್ಕಿತು ಎಂದರು.
ಮಹೇಶ ಜೋಶಿ ಗೈರು: ಅಭಿನಂದನಾ ಸಮಾರಂಭಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಗೈರಾಗಿದ್ದರು. ಸಮಾರಂಭಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಸೇರದ ಕಾರಣ, ಶೇ 50ಕ್ಕೂ ಹೆಚ್ಚು ಕುರ್ಚಿಗಳು ಖಾಲಿ ಇದ್ದವು. ಈ ವಿಷಯಗಳು ಸಾರ್ವಜನಿಕರ ಚರ್ಚೆಗೆ ಗ್ರಾಸವಾದವು.
ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಮ್ಮೇಳನಕ್ಕೆ ಶ್ರಮಿಸಿದವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಪಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮುಖಂಡರಾದ ಅಪ್ಪಾಜಿಗೌಡ, ಎ.ಸಿ.ರಮೇಶ್, ಹನಕೆರೆ ಶಶಿ, ತ್ಯಾಗರಾಜು, ಜಿಲ್ಲಾಧಿಕಾರಿ ಕುಮಾರ, ಜಿ.ಪಂ.ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಭಾಗವಹಿಸಿದ್ದರು.
‘ಸರ್ಕಾರವೇ ನಡೆಸಬೇಕೆಂಬುದು ತರವಲ್ಲ’
ಚಿಂತಕ ಪ್ರೊ.ಕೃಷ್ಣೇಗೌಡ ಮಾತನಾಡಿ ‘ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಸರ್ಕಾರವೇ ನಡೆಸಬೇಕೆಂಬ ಸ್ಥಿತಿಗೆ ಸಾಹಿತ್ಯ ಪರಿಷತ್ ಪರಿಷತ್ ಮತ್ತು ಸಾಹಿತಿಗಳು ತಂದು ನಿಲ್ಲಿಸಿದ್ದಾರೆ. ಸಮ್ಮೇಳನಗಳನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರಕ್ಕೆ ಅದರದೇ ಆದ ಜವಾಬ್ದಾರಿಗಳಿರುತ್ತವೆ ಎಂದರು. ಸಾಹಿತ್ಯ ಸಮ್ಮೇಳನ ಮಾಡಲು ಇಷ್ಟೊಂದು ಜಾತ್ರೆ ಕಟ್ಟಬೇಕಾ ಎನ್ನುವ ಪ್ರಶ್ನೆಯಿದೆ. ಸಾಹಿತ್ಯದ ವಿಷಯಗಳು ಚರ್ಚೆಯಾಗಬೇಕು ನಿಜ. ಆದರೆ ಊಟದ ವಿಚಾರಗಳೇ ಸಾಹಿತ್ಯದಲ್ಲಿ ಚರ್ಚೆಯಾಗುವುದು ತರವಲ್ಲ. ಇವೆಲ್ಲವನ್ನೂ ನಿಭಾಯಿಸಿಕೊಂಡು ತೆಗೆದುಕೊಂಡು ಹೋದ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಮೆಚ್ಚುವಂತಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.