ADVERTISEMENT

2 ಸಾವಿರ ಯುವಜನರಿಗೆ ಉದ್ಯೋಗ ನೀಡುವ ಗುರಿ

ಡಿ.21ರ ಉದ್ಯೋಗ ಮೇಳ ಪೂರ್ವಾಭಾವಿ ಸಭೆ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 12:53 IST
Last Updated 17 ಡಿಸೆಂಬರ್ 2019, 12:53 IST
ಉದ್ಯೋಗ ಮೇಳ ಕುರಿತು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು
ಉದ್ಯೋಗ ಮೇಳ ಕುರಿತು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಮಂಡ್ಯ: ‘ಕಳೆದ ಬಾರಿ ನಡೆದ ಎರಡು ಉದ್ಯೋಗ ಮೇಳ ಬಹಳ ಯಶಸ್ವಿಯಾಗಿ ನಡೆದಿದ್ದು 700 ಯುವಜನರಿಗೆ ದಾರಿ ದೀಪವಾಗಿದೆ. ಅದರಂತೆಯೇ ಡಿ.21ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಕನಿಷ್ಠ 2 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ ಇಟ್ಟುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ನಗರಸಭೆ ವತಿಯಿಂದ ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಉದ್ಯೋಗ ಮೇಳದ ಅಂಗವಾಗಿ ಜಿಲ್ಲಾಧಿಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವುರ ಮಾತನಾಡಿದರು.

‘ಮಂಡ್ಯ, ಮೈಸೂರು, ರಾಮನಗರ, ಹಾಸನ, ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಆ ಮೂಲಕ ಯುವಕರು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಅಂಗವಿಕಲರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ವೇದಿಕೆ ನಿರ್ಮಾಣಗೊಳ್ಳಬೇಕು. ಅಧಿಕಾರಿಗಳು ಉದ್ಯೋಗದಾತ ಹಾಗೂ ಉದ್ಯೋಗ ಆಕಾಂಕ್ಷಿ ನಡುವೆ ಸೇತುವೆ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಈ ಹಿಂದೆ ನಡೆದ ಉದ್ಯೋಗ ಮೇಳಗಳಿಂದ ಜಿಲ್ಲೆಯ ಯುವಜನರಿಗೆ ಅನುಕೂಲವಾಗಿದೆ. ಯುವಕ, ಯುವತಿಯರು ಸರ್ಕಾರಿ ಕೆಲಸವನ್ನೇ ಅವಲಂಬನೆ ಮಾಡಿ ಕುಳತುಕೊಳ್ಳಬಾರದು. ಖಾಸಗಿ ಕ್ಷೇತ್ರದಲ್ಲಿ ಈಗ ಉದ್ಯೋಗ ಮಾರುಕಟ್ಟೆ ಬೃಹತ್‌ ಆಗಿ ಬೆಳೆದಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಆ ಮೂಲಕ ಉತ್ತಮ ಭವಿಷ್ಯ ರೂಪಸಿಕೊಳ್ಳಬೇಕು. ಈ ಬಗ್ಗೆ ಯುವಜನರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಕೆ.ಶಿವಮೂರ್ತಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಜೆ.ಕೆ ಟೈರ್‍, ರಾಣಿ ಮದ್ರಾಸ್, ಗಿಲ್‍ವುಡ್, ಗೋಕುಲ್‍ದಾಸ್, ಶಾಹಿ ಗ್ರೂಪ್ಸ್, ಅಕ್ವೇರಲ್ ಪ್ರೈವೇಟ್‌ ಲಿಮಿಟೆಡ್‌, ಗಿರೀಶ್ ಎಕ್ಸಪೋರ್ಟ್, ಚೋಳ ಪೀಪಲ್ ಅಂಡ್ ಮಾರ್ಕೆಟಿಂಗ್ ಸರ್ವಿಸಸ್, ಇಕ್ವಿಟಾಸ್ ಸ್ಮಾಲ್ ಪೈನಾನ್ಸ್, ಎಚ್.ಡಿ.ಬಿ ಪೈನಾನ್ಸ್, ಲೈಟ್ನಿಂಗ್, ವಿಧಾತ್ರ್ರಿ ಮೋಟರ್ಸ್, ಅರಸ್ ಟಾಟಾ ಮೋಟರ್ಸ್, ಅಪೊಲೊ ಹೋಮ್‌ ಹೆಲ್ತ್‌ಕೇರ್‌, ಉಬರ್, ವುಡ್ ಲ್ಯಾಂಡ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ಸ್ ಮುಂತಾದ ಕಂಪನಿಗಳು ಭಾಗವಹಿಸಲಿವೆ’ ಎಂದರು.

‘ಕಂಪನಿಗಳ ಸಿಬ್ಬಂದಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ಶೈಕ್ಷಣಕ ಅರ್ಹತೆಯ ಎಲ್ಲಾ ಮೂಲ ಪ್ರಮಾಣ ಪತ್ರ, ಸ್ವ ವಿವರ, 2 ಭಾವ ಚಿತ್ರ, ಆಧಾರ್ ಕಾರ್ಡ್ ಪ್ರತಿಯ ಜೊತೆಗೆ ಭಾಗವಹಿಸಬಹುದಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಬಿ.ಇ ಓದಿದವರು ಭಾಗವಹಿಸಬಹುದು.

ಮಾಹಿತಿಗೆ 08232-220126, ಮೊ: 9986263695 ಗೆ ಸಂಪರ್ಕಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.