
ಮದ್ದೂರು: ಪಟ್ಟಣದ ಗ್ರಾಮದೇವತೆ ಮದ್ದೂರಮ್ಮನವರ ಜಾತ್ರಮಹೋತ್ಸವದ ಅಂಗವಾಗಿ ಗುರುವಾರ ನಡೆದ ಸಿಡಿ ಉತ್ಸವವು ಅಪಾರ ಭಕ್ತರ ಜಯಘೋಷಗಳ ನಡುವೆ ನೆರವೇರಿತು.
ಸಂಜೆ 4 ಗಂಟೆಗೆ ಮಠ ಮನೆಯಿಂದ ಭಕ್ತರು ಬಾಯಿ ಬೀಗ ಸಮೇತ ಹೊರಟ ನಂತರ ಸಿಡಿರಣ್ಣನವರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಕ್ಕಳಾಗಲೆಂದು ಹರಕೆ ಹೊತ್ತವರು ತಮ್ಮ ಚಿಕ್ಕ ಮಕ್ಕಳನ್ನು ಸಿಡಿರಣ್ಣನ ಜೊತೆಯಲ್ಲಿ ಸಿಡಿ ಆಡಿಸಿ ಹರಕೆ ತೀರಿಸಿದರು. ಈ ವೇಳೆ ಸಿಡಿರಣ್ಣನಿಗೆ ಹಣ್ಣು ಜವನ ಎಸೆದು ಸಂಭ್ರಮಿಸಿದರು.
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಪಟ್ಟಣದ ಮಠ ಮನೆಯಿಂದ ಸಿಡಿರಣ್ಣನ ಮೆರವಣಿಗೆ ನಡೆಯಿತು. ಈ ವೇಳೆ ಹೆದ್ದಾರಿಯಲ್ಲಿ ಜನರು ಹಾಗೂ ವಾಹನ ಸಂಚಾರ ಹೆಚ್ಚಿತ್ತು, ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೊಲೀಸ ಹರಸಾಹಸ ಪಟ್ಟರು.
ಮೇ 3ರಂದು ಓಕಳಿ ಸೇವೆ ಸಂಜೆ 4 ಗಂಟೆಗೆ ನಡೆಯಲಿದೆ. ಸಂಜೆ 6.30 ಗಂಟೆಗೆ ಉಯ್ಯಾಲೆ ಉತ್ಸವ, ರಾತ್ರಿ 9 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.
ಮೇ 4ರಂದು ಶನಿವಾರ ಸಂಜೆ 4 ಗಂಟೆಗೆ ಶ್ರೀ ಮದ್ದೂರಮ್ಮನವರಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 9 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಯೊಂದಿಗೆ ಮಠ ಮನೆ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.