
ಮಂಡ್ಯ: ಆಧುನಿಕ ಯುಗದಲ್ಲಿ ಒತ್ತಡದ ಜೀವನಶೈಲಿ, ಕಲಬೆರಕೆ ಆಹಾರಗಳಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ‘ಆರೋಗ್ಯವೇ ಮಹಾಭಾಗ್ಯ’ ಎಂಬ ನಾಣ್ಣುಡಿಯ ಅರ್ಥ ಇಂದಿನ ದಿನಗಳಲ್ಲಿ ಎಲ್ಲರಿಗೂ ಹೆಚ್ಚು ಅರ್ಥವಾಗುತ್ತಿದೆ ಎಂದು ಮಂಡ್ಯ ನಗರಸಭೆಯ ಪೌರಾಯುಕ್ತೆ ಪಂಪಾಶ್ರೀ ಹೇಳಿದರು.
ನಗರದ ಹೊಸಹಳ್ಳಿಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ಪಟೇಲ್ ಪೌಂಡೇಷನ್ ಮಂಡ್ಯ, ಸಾಂಜೋ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ನಗರಸಭಾ ಮಾಜಿ ಅಧ್ಯಕ್ಷ .ಎಚ್.ಸಿ.ಬೋರೇಗೌಡ ಸ್ಮರಣಾರ್ಥ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ಮತ್ತು ಗ್ರಾಮೀಣ ಜನರ ಬಾಗಿಲಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಸೌಲಭ್ಯ ಸಿಗುತ್ತಿದೆ. ನಾಗರಿಕರು ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನೇ ಭಾಗ್ಯವನ್ನಾಗಿ ನೋಡಿಕೊಂಡರೆ ಎಲ್ಲ ಭಾಗ್ಯಗಳು, ಸಂಪತ್ತು ಉಳಿಯುತ್ತವೆ ಎಂದರು.
ಹೊಸಹಳ್ಳಿ ಬೋರೇಗೌಡ ಅವರು, ನಗರಸಭಾ ಸದಸ್ಯರು ಮತ್ತು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾವು ಅಧಿಕಾರಿಗಳಾಗಿದ್ದೆವು. ಸಹೃದಯರು, ಜನಪರ ಕಾಳಜಿಯುಳ್ಳ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು.
ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿದರು. ನಗರಸಭಾ ಸದಸ್ಯರಾದ ಪವಿತ್ರಾ ಬೋರೇಗೌಡ, ಮಂಗಳಾ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ, ಸಾಂಜೋ ಆಸ್ಪತ್ರೆ ಆಡಳಿತಾಧಿಕಾರಿ ರೆ.ಸಿಸ್ಟರ್ ಡೋಯಲ್, ಮಾಜಿ ಸದಸ್ಯ ಪ್ರಸನ್ನ, ನಿವೃತ್ತ ಅಧಿಕಾರಿ ಬಿ.ಎಂ.ಅಪ್ಪಾಜಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಶಿವಲಿಂಗೇಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ್, ಮುಖಂಡರಾದ ಜೆ.ಕೆ.ಶ್ರೀಕಾಂತ್, ಲಕ್ಷ್ಮಣ ಪಟೇಲ್, ಎಚ್.ಸ್ವಾಮಿಗೌಡ, ಬೋರೇಗೌಡ, ಗಾಯಕ ದೇವರಾಜ್ ಕೊಪ್ಪ ಇದ್ದರು.