
ಮಂಡ್ಯ: ಜಿಲ್ಲಾ ಕಾರಾಗೃಹ ಬಂದಿಗಳಿಗೆ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲು ಅಗತ್ಯವಿರುವ 200 ಕೈದಿಗಳ ಸಾಮರ್ಥ್ಯದ ಹೆಚ್ಚುವರಿ ಬ್ಯಾರಕ್ ಮಂಜೂರಾಗಿದೆ. ಅನೇಕ ಸೌಲಭ್ಯಗಳನ್ನು ಕಲ್ಪಿಸಿ, ಕಾರಾಗೃಹವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ.
1944ರಲ್ಲಿ ನಿರ್ಮಾಣವಾಗಿರುವ ಮಂಡ್ಯ ಜಿಲ್ಲಾ ಕಾರಾಗೃಹವು ನಗರದ ಕೇಂದ್ರ ಭಾಗದಲ್ಲಿ ಏಳು ಎಕರೆ ಪ್ರದೇಶ ಹೊಂದಿದೆ. ಪ್ರಸಕ್ತ 4 ಎಕರೆಯಲ್ಲಿ ಕಟ್ಟಡವನ್ನು ಹೊಂದಿದ್ದು, ಉಳಿದ 3 ಎಕರೆ ಜಾಗದಲ್ಲಿ ಹೊಸ ಬ್ಯಾರಕ್ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ. ₹9.90 ಕೋಟಿ ವೆಚ್ಚದ ಬ್ಯಾರಕ್ ನಿರ್ಮಾಣದ ಹೊಣೆಯನ್ನು ಮೈಸೂರಿನ ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ಗೆ ನೀಡಲಾಗಿದೆ.
ಈ ಬ್ಯಾರಕ್ನಲ್ಲಿ ಬಂಧಿತ ಕೊಠಡಿಗಳು, ಸುಧಾರಣಾ ಗೃಹ, ಧ್ಯಾನ ಮಂದಿರ, ವೃತ್ತಿಪರ ತರಬೇತಿ ಕೇಂದ್ರ, ಆಸ್ಪತ್ರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲರ ಕೊಠಡಿ, ಗ್ರಂಥಾಲಯ, ಸಾಕ್ಷರತಾ ಕೊಠಡಿ ಇನ್ನಿತರ ಕೊಠಡಿಗಳನ್ನು ನಿರ್ಮಿಸಲು ನೀಲನಕ್ಷೆ ರೂಪಿಸಲಾಗಿದೆ.
ಈ ಕಾರಾಗೃಹದಲ್ಲಿ 275 ಬಂದಿಗಳಿಗೆ ಅಧಿಕೃತ ಸ್ಥಳಾವಕಾಶವಿದೆ. ಆದರೆ, ಸರಾಸರಿ 325ರಿಂದ 350 ಬಂದಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಅನಿವಾರ್ಯತೆಯಿದೆ. ಕೆಲವೊಮ್ಮೆ ಗರಿಷ್ಠ 475 ಬಂದಿತರು ದಾಖಲಾದ ಉದಾಹರಣೆಯೂ ಇದೆ.
2023ರಲ್ಲಿ ಪ್ರಸ್ತಾವ: ಕಾರಾಗೃಹವು ಕೈದಿಗಳ ದಟ್ಟಣೆಯಿಂದ ಕೂಡಿರುವುದರಿಂದ ಅವರನ್ನು ನಿರ್ವಹಣೆ ಮಾಡಲು, ತರಬೇತಿ ನೀಡಲು ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ತೊಡಕಾಗುತ್ತಿತ್ತು. ಆದ್ದರಿಂದ ಈ ಬಗ್ಗೆ 2023ರಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ಜಿಲ್ಲಾ ಕಾರಾಗೃಹ ಅಧೀಕ್ಷಕರು ಪ್ರಸ್ತಾವ ಸಲ್ಲಿಸಿದ್ದರು.
ಮಂಡ್ಯ ಸೇರಿದಂತೆ ತುಮಕೂರು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್ಚುವರಿ ಸಾಮರ್ಥ್ಯದ ಬ್ಯಾರಕ್ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ. ಅಷ್ಟೇ ಅಲ್ಲದೆ, ಅತ್ಯಂತ ಹಳೆಯ ಕಾರಾಗೃಹ ಕಟ್ಟಡಗಳನ್ನು ಹೊಂದಿದ್ದ ವಿಜಯಪುರ, ಬೀದರ್, ಮಂಗಳೂರು ಜಿಲ್ಲೆಗೆ ಸಾವಿರ ಬಂದಿಗಳ ಸಾಮರ್ಥ್ಯದ ‘ಹೊಸ ಕಾರಾಗೃಹ’ ನಿರ್ಮಿಸಲು ಅನುಮತಿ ದೊರಕಿದೆ. ಬೆಂಗಳೂರಿನಲ್ಲಿ ಹೈ ಸೆಕ್ಯುರಿಟಿ ಬ್ಯಾರಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ಹೈ ಪ್ರೊಫೈಲ್ ಕೈದಿಗಳನ್ನು ಇಡಲು ಇಲಾಖೆ ಮುಂದಾಗಿದೆ.
‘ಕಾರಾಗೃಹದಿಂದ ಬಿಡುಗಡೆಯಾದವರಿಗೆ ಹೊರಗಡೆ ಉದ್ಯೋಗ ಸಿಗುತ್ತಿಲ್ಲ’ ಎಂಬ ದೂರುಗಳು ಕೇಳಿಬಂದ ಮೇರೆಗೆ, ಕಾರಾಗೃಹ ವತಿಯಿಂದಲೇ ‘ಪೆಟ್ರೋಲ್ ಬಂಕ್’ ಮತ್ತು ‘ಇವಿ ಚಾರ್ಜಿಂಗ್ ಸ್ಟೇಷನ್’ ಸ್ಥಾಪಿಸಿ, ಉದ್ಯೋಗ ಕಲ್ಪಿಸಲು ಹೊಸ ಯೋಜನೆ ರೂಪುಗೊಳ್ಳುತ್ತಿದೆ. ಶೀಘ್ರದಲ್ಲೇ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ ಎಂದು ಕಾರಾಗೃಹ ಅಧಿಕಾರಿಗಳು ಮಾಹಿತಿ ನೀಡಿದರು.
ಹೊಸ ಬ್ಯಾರಕ್ ನಿರ್ಮಾಣವಾದರೆ 475 ಬಂಧಿತರಿಗೆ ಸ್ಥಳಾವಕಾಶ ಕಲ್ಪಿಸಬಹುದು. ಭದ್ರತೆ ಹೆಚ್ಚಿಸಿ ಸುಧಾರಣಾ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ– ಟಿ.ಕೆ.ಲೋಕೇಶ್ ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ
ಮನಃಪರಿವರ್ತನೆಗೆ ಸುಧಾರಣಾ ಕ್ರಮಗಳು
‘ಕಾರಾಗೃಹದ ಬಂಧಿಗಳ ಮನಃಪರಿವರ್ತನೆಗೆ ಬೆಳಿಗ್ಗೆ ಧ್ಯಾನ ಯೋಗಾಭ್ಯಾಸ ಆಧ್ಯಾತ್ಮಿಕ ಉಪನ್ಯಾಸ ಚಟುವಟಿಕೆ ನಡೆಯುತ್ತವೆ. ಉಪಾಹಾರ ಸೇವಿಸಿದ ನಂತರ ಅನಕ್ಷರಸ್ಥ ಬಂದಿಗಳಿಗೆ ಸಾಕ್ಷರತಾ ಕಾರ್ಯಕ್ರಮ ಮತ್ತು ಅಕ್ಷರಸ್ಥ ಬಂದಿಗಳು ಅಧ್ಯಯನ ಮಾಡಲು 23 ಸಾವಿರ ಪುಸ್ತಕಗಳನ್ನು ಒಳಗೊಂಡಿರುವ ಬೃಹತ್ ಗ್ರಂಥಾಲಯ ಸೌಲಭ್ಯವಿದೆ’ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ತಿಳಿಸಿದರು. ‘ಪುರುಷ ಕೈದಿಗಳಿಗೆ ಪ್ಲಂಬಿಂಗ್ ಮೋಟಾರ್ ರಿವೈಂಡಿಂಗ್ ಎಲೆಕ್ಟ್ರಿಕಲ್ ಉಪಕರಣಗಳ ರಿಪೇರಿ ಅಣಬೆ ತಯಾರಿಕೆ ಹಾಗೂ ಮಹಿಳಾ ಕೈದಿಗಳಿಗೆ ಟೇಲರಿಂಗ್ ಬ್ಯೂಟಿಷಿಯನ್ ಫಾಸ್ಟ್ ಫುಡ್ ತಯಾರಿಕೆ ಅಗರಬತ್ತಿ ಪ್ಯಾಕಿಂಗ್ ಆಲಂಕಾರಿಕ ವಸ್ತುಗಳ ತಯಾರಿಕೆಯ ತರಬೇತಿ ನೀಡುತ್ತಿದ್ದೇವೆ. ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲಗಳನ್ನು ಕಲಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಕಾಲ್ ಬ್ಲಾಕಿಂಗ್ ಸಿಸ್ಟಂ’
ಮಂಜೂರು ಕಾರಾಗೃಹದಲ್ಲಿರುವ ಬಂಧಿಗಳು ಅಕ್ರಮವಾಗಿ ಮೊಬೈಲ್ ಬಳಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ‘ಕಾಲ್ ಬ್ಲಾಕಿಂಗ್ ಸಿಸ್ಟಂ’ (ಟಿ–ಎಚ್.ಸಿ.ಬಿ.ಎಸ್) ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿರುವ ಜಿಲ್ಲಾ ಕಾರಾಗೃಹಗಳಲ್ಲಿ ಈ ಸೌಲಭ್ಯ ಪಡೆಯಲಿರುವ ಮೊದಲ ಎರಡು ಜಿಲ್ಲೆಗಳೆಂದರೆ ಮಂಡ್ಯ ಮತ್ತು ತುಮಕೂರು. ‘ಸುಮಾರು ₹2 ಕೋಟಿ ವೆಚ್ಚದಲ್ಲಿ ಈ ಟವರ್ಗಳನ್ನು ಕಾರಾಗೃಹದ ಆವರಣದಲ್ಲಿ ಅಳವಡಿಸಲಿದ್ದು ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಕಣ್ತಪ್ಪಿಸಿ ಮೊಬೈಲ್ ಬಳಸಿದರೂ ಸಿಸ್ಟಮ್ನಲ್ಲಿ ತೋರಿಸುವ ಹೊಸ ತಂತ್ರಜ್ಞಾನ ಇದಾಗಿದೆ’ ಎಂದು ಜಿಲ್ಲಾ ಕಾರಾಗೃಹದ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.