ADVERTISEMENT

ಮಂಡ್ಯ | ನಾಗಮೋಹನ್‌ದಾಸ್‌ ವರದಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:04 IST
Last Updated 27 ಫೆಬ್ರುವರಿ 2026, 7:04 IST
ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಯು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಯು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ‘ಪರಿಶಿಷ್ಟ 101 ಜಾತಿಗಳ ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿ ಅವೈಜ್ಞಾನಿಕವಾಗಿದೆ ಹಾಗೂ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ, ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿ ಬಲಗೈ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನರಗದ ಸರ್‌ ಎಂ.ವಿ. ಪ್ರತಿಮೆ ಎದುರು ಗುರುವಾರ ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರು ಸಿದ್ಧಪಡಿಸಿರುವ ಒಳಮೀಸಲಾತಿ ಸಮೀಕ್ಷೆಯ ವರದಿಯು ಅವೈಜ್ಞಾನಿಕ. ಇದನ್ನು ರಾಜ್ಯಪಾಲರು ತಿರಸ್ಕರಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಮತ್ತೆ ಸರ್ಕಾರವು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಇದರ ನಡುವೆ ಸರ್ಕಾರವು ಶೇ 56ರಷ್ಟು ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಹೈಕೋರ್ಟ್‌ ಶೇ 50ರಷ್ಟು ಮೀರಬಾರದೆಂದು ತಡೆಯಾಜ್ಞೆ ನೀಡಿದೆ ಎಂದರು.

ADVERTISEMENT

ನಾಗಮೋಹನ್‌ದಾಸ್‌ ಅವರ ವರದಿ ರಾಜ್ಯಪಾಲರ ಅಂಕಿತ ಸಿಗುವ ಮೊದಲೇ ಪ್ರವರ್ಗ–ಎ, ಪ್ರವರ್ಗ–ಬಿ ಮತ್ತು ಪ್ರವರ್ಗ–ಸಿ ಎಂದು ಹೊಸ ಜಾತಿಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಬೇಕು. ಹಳೆಯ ಜಾತಿ ಪತ್ರವನ್ನೇ ಮುಂದುವರಿಸಬೇಕು. ಒಳಮೀಸಲಾತಿಗೆ ರೋಸ್ಟರ್‌ ಬಿಂದುವನ್ನು ಹಿಂದಿನಂತೆಯೇ ಅಂಗೀಕರಿಸಬೇಕು. ಪ್ರಸ್ತುತ ಪರಿಷ್ಕರಿಸಿರುವುದನ್ನು ತಡೆಹಿಡಿಯಬೇಕು. ಒಳಮೀಸಲಾತಿ ಗೊಂದಲ ಸರಿಪಡಿಸುವವರೆಗೂ ಹಿಂದಿನಂತೆಯೇ ಮೀಸಲಾತಿ ನಿಯಮಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಿ.ಪಿ. ಪ್ರಕಾಶ್‌, ಸುರೇಶ್‌ಕಂಠಿ, ಎಂ.ವಿ.ಕೃಷ್ಣ, ನಿರಂಜನ್‌, ಜಯರಾಂ, ಶ್ರೀಧರ್, ಹರೀಶ್, ದೀಪಕ್‌, ಹಲ್ಕೆರೆ ಮಹದೇವು, ಲವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.