ಮಂಡ್ಯ: ‘ಇಲ್ಲಿ ಹೋದ ವರ್ಷ ಡಿ.20ರಿಂದ 22ರವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ₹29.65 ಕೋಟಿ ವೆಚ್ಚವಾಗಿದ್ದು, ₹2.53 ಕೋಟಿ ಉಳಿದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ 2 ಕಂತುಗಳಲ್ಲಿ ಒಟ್ಟು ₹30 ಕೋಟಿ ಅನುದಾನ ನೀಡಿತ್ತು. ಜೊತೆಗೆ ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ ಹಾಗೂ ನೌಕರರ ಒಂದು ದಿನ ವೇತನದ ದೇಣಿಗೆ (ಎಚ್.ಆರ್.ಎಂ.ಎಸ್ ನೌಕರರನ್ನು ಹೊರತುಪಡಿಸಿ) ₹1.20 ಕೋಟಿ ಹಾಗೂ ಜಿಲ್ಲಾ ಖಜಾನೆ ವ್ಯಾಪ್ತಿಯ ಸರ್ಕಾರಿ ನೌಕರರ ದೇಣಿಗೆ ₹1.08 ಕೋಟಿ ಸೇರಿ ಒಟ್ಟು ₹32.74 ಕೋಟಿ ಸಂಗ್ರಹವಾಗಿತ್ತು’ ಎಂದು ಮಾಹಿತಿ ನೀಡಿದರು.
‘₹29.65 ಕೋಟಿಯಲ್ಲಿ ₹3.17 ಕೋಟಿ ಜಿಎಸ್ಟಿ, ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ (ಎಂಸಿಎ) ಸೇವಾ ಶುಲ್ಕ ₹1.08 ಕೋಟಿ ಸೇರಿದೆ’ ಎಂದು ವಿವರಿಸಿದರು.
‘ಸಮ್ಮೇಳನದ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಅಚ್ಚುಕಟ್ಟಾಗಿ ನಡೆದವು. ಊಟ, ವಸತಿ ಸೇರಿದಂತೆ ಮೂಲಸೌಕರ್ಯವನ್ನು ಜಿಲ್ಲಾಡಳಿತ ಸಮರ್ಪಕವಾಗಿ ಕಲ್ಪಿಸಿತ್ತು. ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು, ಮಂಡ್ಯ ಚರಿತ್ರೆಯಲ್ಲಿ ದಾಖಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ಖರ್ಚು ಮಾಡಲಾಗಿದೆ. ಟೀಕೆ–ಟಿಪ್ಪಣಿಗಳು ಬಂದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮೀರಾ ಶಿವಲಿಂಗಯ್ಯ ಪಾಲ್ಗೊಂಡಿದ್ದರು.
‘ಉಳಿಕೆ ಹಣದಲ್ಲಿ ಕನ್ನಡ ಭವನ’
‘ಉಳಿತಾಯವಾಗಿರುವ ₹2.53 ಕೋಟಿಯನ್ನು ಸಮ್ಮೇಳನದ ಸವಿನೆನಪಿನ ‘ಕನ್ನಡ ಭವನ’ ನಿರ್ಮಾಣಕ್ಕೆ ಬಳಸಲಾಗುವುದು. ಜೊತೆಗೆ ಸರ್ಕಾರದಿಂದ ₹2.50 ಕೋಟಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ 3 ಕಡೆ ನಿವೇಶನಗಳನ್ನು ನೋಡಿದ್ದು ಅನುಮತಿ ದೊರೆತ ಬಳಿಕ ಶಂಕುಸ್ಥಾಪನೆ ನೆರವೇರಿಸುತ್ತೇವೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು.
‘ಜೋಶಿ ಗೈರು; ಕಸಾಪದ ಲೆಕ್ಕ ಯಾವಾಗ?’
ಪತ್ರಿಕಾಗೋಷ್ಠಿಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಗೈರುಹಾಜರಾದುದು ಚರ್ಚೆಗೆ ಗ್ರಾಸವಾಗಿದೆ. ‘ಸಮ್ಮೇಳನಕ್ಕೆ ಬಿಡುಗಡೆಯಾದ ₹30 ಕೋಟಿ ಅನುದಾನದಲ್ಲಿ ಕಸಾಪಕ್ಕೆ ₹2.50 ಕೋಟಿ ನೀಡಲಾಗಿದೆ. ಅದರ ಖರ್ಚು–ವೆಚ್ಚದ ವಿವರ ನೀಡಲು ಜೋಶಿಯವರು ಏಕೆ ಬಂದಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ‘ಜೋಶಿಯವರನ್ನು ಡಿ.ಸಿ ಕರೆದಿದ್ದರು. ಏಕೆ ಬಂದಿಲ್ಲ ಎಂಬುದು ಗೊತ್ತಿಲ್ಲ. ಶೀಘ್ರದಲ್ಲೇ ಖರ್ಚಿನ ವಿವರ ಕೊಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.