
ಪಾಂಡವಪುರ: ‘ಮನರೇಗಾ ಬದಲಿಗೆ ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಇದೇ 26ರವರೆಗೆ ಚಳವಳಿ ರೂಪಿಸಲಾಗಿದೆ’ ಎಂದು ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ವಿಬಿ–ಜಿ ರಾಮ್ ಜಿ ಯೋಜನೆಯನ್ನು ರದ್ದುಪಡಿಸಿ, ಮನರೇಗಾ ಬಲಪಡಿಸುವಂತೆ ಒತ್ತಾಯಿಸಿ ಜ.8ರಂದು ನವದೆಹಲಿಯಲ್ಲಿ ನೂರಾರು ಸಂಘಟನೆಗಳು ಒಗ್ಗೂಡಿ ಚಳವಳಿ ರೂಪಿಸಲು ತೀರ್ಮಾನಿಸಿವೆ. 26ರಂದು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ಉಳಿಸುವಂತೆ ಒತ್ತಾಯಿಸಿ ಠರಾವು ಪಾಸ್ ಮಾಡಲಾಗುವುದು. ಜತೆಗೆ ಮನರೇಗಾ ಪ್ರಾರಂಭವಾಗಿ ಫೆ.2ಕ್ಕೆ 20 ವರ್ಷಗಳು ತುಂಬುತ್ತಿರುವುದರಿಂದ ಆ ದಿನವೂ ಎಲ್ಲಾ ಹಳ್ಳಿಗಳಲ್ಲಿ ಮನರೇಗಾ ಮಹತ್ವ ತಿಳಿಸಲಾಗುವುದು’ ಎಂದು ಹೇಳಿದರು.
‘ಮನರೇಗಾ ಯೋಜನೆ ಕುರಿತು ರಾಜ್ಯದ ಸಂಸದರು ಸಂಸತ್ನಲ್ಲಿ ದನಿ ಎತ್ತದೆ ಮೌನವಾಗಿರುವುದು ನಿಜಕ್ಕೂ ವಿಷಾದಕರ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಹನುಮೇಶ್, ಸಂಘಟನೆಯ ಮುಖಂಡ ಎಂ.ಬೆಟ್ಟಹಳ್ಳಿ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.